ADVERTISEMENT

ದೇವೇಗೌಡರ ಮನವಿಗೆ ಸೊಪ್ಪು ಹಾಕಬೇಡಿ: ಎಚ್.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 18:12 IST
Last Updated 21 ಜನವರಿ 2022, 18:12 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌   

ಮೈಸೂರು: ‘2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುವಂತೆ ಕೋರಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಸಲ್ಲಿಸಿರುವ ಮನವಿಗೆ ಸೊಪ್ಪು ಹಾಕಬೇಡಿ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಂವಿಧಾನಬಾಹಿರವಾಗಿ ಆಯ್ಕೆಯಾದ 362 ಮಂದಿ ಸುಪ್ರೀಂಕೋರ್ಟ್‌ ತೀರ್ಪನ್ನು ಧಿಕ್ಕರಿಸಿ ಒಬ್ಬ ರಾಜಕಾರಣಿಗೆ ಮನವಿ ಸಲ್ಲಿಸುವುದು, ಆ ರಾಜಕಾರಣಿ ಮುಖ್ಯಮಂತ್ರಿಗೆ ಪತ್ರ ಬರೆಯುವುದು, ಅದನ್ನು ಆಧರಿಸಿ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳಲು ಮುಂದಾಗುವುದೆಂದರೆ ಏನರ್ಥ’ ಎಂದು ಆಕ್ಷೇಪಿಸಿದರು.

‘ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತಿ, ದುಡ್ಡಿನ ಬಲದಿಂದಲೇ ಅಯ್ಕೆಯಾಗಿದ್ದವರು ಸಿರಿಗೆರೆಯ ತರಳುಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೂ ಮನವಿ ಸಲ್ಲಿಸಿದ್ದರು. ದೇಶದ ನ್ಯಾಯ ವ್ಯವಸ್ಥೆಯನ್ನು ರಾಜಕಾರಣಿಗಳು, ಸ್ವಾಮೀಜಿಗಳು ಕೈಗೆತ್ತಿಕೊಂಡರೆ ಪರಿಸ್ಥಿತಿ ಏನಾಗಬೇಕು? ಹೈಕೋರ್ಟ್‌, ಸುಪ್ರೀಂಕೋರ್ಟ್‌ ತೀರ್ಪಿಗೆ ಬೆಲೆಯಿಲ್ಲವೇ?’ ಎಂದು ಕಿಡಿಕಾರಿದರು.

ADVERTISEMENT

‘ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಆದರೆ ಅವರು ಭ್ರಷ್ಟಾಚಾರದಿಂದ ಆಯ್ಕೆಯಾದವರ ಪರ ನಿಂತದ್ದು ಸರಿಯಲ್ಲ. ಸುಪ್ರೀಂಕೋರ್ಟ್‌ನ ತೀರ್ಪನ್ನೇ ಧಿಕ್ಕರಿಸುವಂತಹ ಕಾಲದಲ್ಲಿ ಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವವರು ಯಾರು’ ಎಂದು ಪ್ರಶ್ನಿಸಿದರು.

‘362 ಮಂದಿಗೆ ಅನ್ಯಾಯ ಆಗಿದೆ ಎನ್ನುತ್ತಿದ್ದೀರಿ. ಆದರೆ ಅವರೊಂದಿಗೆ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದ ಲಕ್ಷಾಂತರ ಮಂದಿ ಮತ್ತು ಪ್ರಿಲಿಮಿನರಿ ಪರೀಕ್ಷೆ ಉತ್ತೀರ್ಣರಾಗಿದ್ದ ಸಾವಿರಾರು ಮಂದಿ ನಿಮಗೆ ಲೆಕ್ಕಕ್ಕಿಲ್ಲವೇ? ಅವರಿಗೆ ಅನ್ಯಾಯವಾದರೂ ಕೇಳುವವರು ಇಲ್ಲವೇ? ರಾಜಕಾರಣಿಗಳ ಶಿಫಾರಸಿನಂತೆ ಆಯ್ಕೆಯಾದವರ ಬಗ್ಗೆ ಏಕಿಷ್ಟು ಕಾಳಜಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.