ADVERTISEMENT

ಕೆ.ಆರ್.ನಗರ: 'ಕಾರ್ಖಾನೆಗೆ ಅಧಿಕಾರಿಗಳಿಂದ ನಷ್ಟ, ಅವಮಾನ'

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 15:26 IST
Last Updated 11 ನವೆಂಬರ್ 2023, 15:26 IST

ಕೆ.ಆರ್.ನಗರ: ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ವಹಿಸಿಕೊಂಡಿರುವ ನಿರಾಣಿ ಶುಗರ್ಸ್ ನಲ್ಲಿರುವ ಅಧಿಕಾರಿಗಳಿಂದ ನನಗೆ ನಷ್ಟ ಮತ್ತು ಅವಮಾನವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು  ಎಂದು ಕಬ್ಬು ಬೆಳೆಗಾರ ಕುಪ್ಪೆ ಗ್ರಾಮದ ಚಂದನ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ನಿರಾಣಿ ಶುಗರ್ಸ್ ಕಾರ್ಖನೆಯವರು 12 ತಿಂಗಳಲ್ಲಿ ಕಟಾವಿಗೆ ಬಂದ ಕಬ್ಬಿಗೆ 15 ತಿಂಗಳ ನಂತರ ಕಟಾವು ಮಾಡಲು ಅನುಮತಿ ನೀಡಿದರು. ಕಟಾವು ಮಾಡಿದ್ದ ಕಬ್ಬು ಕಾರ್ಖಾನೆಗೆ ಸಾಗಿಸಲು ಹೊರಟರೆ ಚುಂಚನಕಟ್ಟೆ ಮತ್ತು ಪಾಂಡವಪುರ ಎರಡೂ ಕಾರ್ಖಾನೆಗಳು ಸ್ಥಗಿತಗೊಂಡಿದ್ದವು. ಇಲ್ಲಸಲ್ಲದ ಸಬೂಬು ಹೇಳಿ 4-5 ದಿನ ಕಬ್ಬು ಒಣಗಿಸಿದರು, ನನ್ನನ್ನು ಕಾಯಿಸಿದರು. ನಂತರ ಮದ್ದೂರಿನ ಎನ್ಎಸ್ಎಲ್ ಶುಗರ್ಸ್ ಕೊಪ್ಪ ಕಾರ್ಖಾನೆಗೆ ಕಬ್ಬು ಸಾಗಿಸುವಂತೆ ಸೂಚಿಸಿದರು. ಎನ್ಎಸ್ಎಲ್ ಶುಗರ್ಸ್ ಕೊಪ್ಪ ಕಾರ್ಖಾನೆಗೆ ತೆಗೆದುಕೊಂಡ ಹೋದ ಕಬ್ಬನ್ನು ಉದ್ದೇಶಪೂರ್ವಕವಾಗಿ ನನಗೆ ಗೊತ್ತಿಲ್ಲದವರ ಹೆಸರಿಗೆ ವರ್ಗಾವಣೆ ಮಾಡಿ ತೊಂದರೆ ಕೊಟ್ಟಿದ್ದಾರೆ’ ಎಂದು ಆರೋಪಿಸಿದರು.

‘ನಿರಾಣಿ ಶುಗರ್ಸ್ ಮತ್ತು ಎನ್ಎಸ್ಎಲ್ ಶುಗರ್ಸ್  ನನಗೆ ಮೋಸವಾಗಿದ್ದು, ಕಾರ್ಖಾನೆಗೆ ಸಾಗಿಸಿದ ಕಬ್ಬಿನ ಹಣ ಕೇಳಿದರೆ ಅಲ್ಲಿನ ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕಾರ್ಖಾನೆಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ನನಗೆ ಬರಬೇಕಾದ ಹಣ ಕೊಡಿಸಬೇಕು’ ಎಂದು ಒತ್ತಾಯಿಸಿದರು. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವೀಂದ್ರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.