ADVERTISEMENT

ಮೈಸೂರು| ಜ್ಞಾನ ಸಮಾಜದ ಕಲ್ಯಾಣಕ್ಕೆ ಬಳಸಿ: ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:43 IST
Last Updated 1 ಫೆಬ್ರುವರಿ 2026, 5:43 IST
<div class="paragraphs"><p>ಮೈಸೂರಿನಲ್ಲಿ ಶನಿವಾರ ನಡೆದ ಕೆಎಸ್‌ಒಯು ಘಟಿಕೋತ್ಸವದಲ್ಲಿ 8 ಸಾಧಕರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಕುಲಪತಿ ಪ್ರೊ. ಶರಣಪ್ಪ ಹಲಸೆ, ಕುಲಸಚಿವರಾದ ಪ್ರೊ. ಎಸ್‌.ಕೆ. ನವೀನ್‌ಕುಮಾರ್, ಸಿ.ಎಸ್. ಆನಂದ್‌ಕುಮಾರ್ ಜೊತೆಗಿದ್ದರು</p></div>

ಮೈಸೂರಿನಲ್ಲಿ ಶನಿವಾರ ನಡೆದ ಕೆಎಸ್‌ಒಯು ಘಟಿಕೋತ್ಸವದಲ್ಲಿ 8 ಸಾಧಕರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಕುಲಪತಿ ಪ್ರೊ. ಶರಣಪ್ಪ ಹಲಸೆ, ಕುಲಸಚಿವರಾದ ಪ್ರೊ. ಎಸ್‌.ಕೆ. ನವೀನ್‌ಕುಮಾರ್, ಸಿ.ಎಸ್. ಆನಂದ್‌ಕುಮಾರ್ ಜೊತೆಗಿದ್ದರು

   

ಪ್ರಜಾವಾಣಿ ಚಿತ್ರ

ಮೈಸೂರು: ‘ಪದವೀಧರರು ತಮ್ಮ ಶಿಕ್ಷಣ ಮತ್ತು ಜ್ಞಾನವನ್ನು ರಾಷ್ಟ್ರ ಮತ್ತು ಸಮಾಜದ ಕಲ್ಯಾಣಕ್ಕಾಗಿ ಬಳಸಬೇಕು’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಆಶಿಸಿದರು.

ADVERTISEMENT

ಇಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕೃತಕ ಬುದ್ಧಿಮತ್ತೆ (ಎಐ), ಡಿಜಿಟಲ್ ಕ್ರಾಂತಿ ಮತ್ತು ಹಸಿರು ತಂತ್ರಜ್ಞಾನ ಎಲ್ಲವೂ ನಮ್ಮ ಜೀವನ ಮತ್ತು ಉದ್ಯೋಗವನ್ನು ಪರಿವರ್ತಿಸುತ್ತಿವೆ. ಈ ಪರಿಸರದಲ್ಲಿ ವಿದ್ಯಾರ್ಥಿಗಳು ನಿರಂತರ ಕಲಿಕೆಯ ಮನೋಭಾವ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ದೂರ ಶಿಕ್ಷಣ ವ್ಯವಸ್ಥೆಯು ಇಂದು ಡಿಜಿಟಲ್ ವೇದಿಕೆ ಮೂಲಕ ಹೆಚ್ಚು ಪರಿಣಾಮಕಾರಿ ಆಗುತ್ತಿದೆ. ಭವಿಷ್ಯದಲ್ಲಿ ವಿಶ್ವವಿದ್ಯಾಲಯವು ಕೌಶಲ ಆಧಾರಿತ ಕೋರ್ಸ್‌ಗಳು, ಉದ್ಯೋಗ-ಆಧಾರಿತ ತರಬೇತಿ ಮತ್ತು ಸಂಶೋಧನೆಯನ್ನು ಮತ್ತಷ್ಟು ಬಲಪಡಿಸಲಿ’ ಎಂದು ಆಶಿಸಿದರು.

ವೈವಿಧ್ಯಮಯ ಹಿನ್ನೆಲೆ: ‘ಕೆಎಸ್‌ಒಯುನಿಂದ ಪದವಿ ಪಡೆದ ಎಲ್ಲರೂ ವೈವಿಧ್ಯಮಯ ಹಿನ್ನೆಲೆಯಿಂದ ಬಂದಿದ್ದಾರೆ. ಕೆಲವರು ಕೆಲಸ ಮಾಡುತ್ತಲೇ ಅಧ್ಯಯನ ಮಾಡಿದ್ದಾರೆ, ಕೆಲವರು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಹಲವರು ಆರ್ಥಿಕ ತೊಂದರೆಗಳ ನಡುವೆಯೂ ಕಷ್ಟಪಟ್ಟು ಓದಿದ್ದಾರೆ. ಇದು ನಿಮ್ಮ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ. ನಿಮ್ಮ ಜೀವನದುದ್ದಕ್ಕೂ ಈ ಇಚ್ಛಾಶಕ್ತಿಯನ್ನು ಕಾಪಾಡಿಕೊಳ್ಳಿ. ಕಲಿಯುತ್ತಲೇ ಇರಿ, ಪ್ರಗತಿ ಸಾಧಿಸುತ್ತಾ ಇರಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸಿ’ ಎಂದು ಸಲಹೆ ನೀಡಿದರು.

ವರ್ಚುವಲ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದ ಕೇಂದ್ರ ಶಿಕ್ಷಣ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್, ‘ದೇಶದಲ್ಲಿ ದೂರಶಿಕ್ಷಣ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು, ಉನ್ನತ ಶಿಕ್ಷಣವನ್ನು ಒದಗಿಸುವಲ್ಲಿ ಮುಕ್ತ ವಿವಿ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದರು.

‘ಕೇಂದ್ರ ಸರ್ಕಾರವು ದೂರ ಶಿಕ್ಷಣ ಮತ್ತು ಆನ್‌ಲೈನ್ ಶಿಕ್ಷಣ ಬಲಪಡಿಸಲು ಹಲವು ಕ್ರಮ ಕೆಗೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯೂ ಇದನ್ನೇ ಅನುಮೋದಿಸುತ್ತದೆ. ಮುಕ್ತ ವಿವಿಗಳು ರಾಷ್ಟ್ರ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಉನ್ನತ ಶಿಕ್ಷಣದ ಪ್ರವೇಶ ವಿಸ್ತರಿಸುವಲ್ಲಿ, ಮರು ಕೌಶಲ ಮತ್ತು ಉನ್ನತೀಕರಣ ಬೆಂಬಲಿಸುವಲ್ಲಿ, ಯುವಕರು, ಮಹಿಳೆಯರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಶಿಕ್ಷಣವನ್ನು ಸಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಹೇಳಿದರು.

ಮುಕ್ತ ವಿ.ವಿ. ಕುಲಪತಿ ಪ್ರೊ. ಶರಣಪ್ಪ ಹಲಸೆ, ‘ವಿ.ವಿಯು ಮುಕ್ತ ವಿ.ವಿ.ಗಳ ಪೈಕಿ ದೇಶದಲ್ಲೇ 2ನೇ ರ್‍ಯಾಂಕ್‌ ಪಡೆದಿರುವುದು ಹೆಮ್ಮೆ. ಉದ್ಯೋಗಸ್ಥ ಜನಸಾಮಾನ್ಯರ ಉನ್ನತ ಶಿಕ್ಷಣದ ಕನಸಿಗೆ ನೀರೆರೆಯುತ್ತಿದೆ. ಪದವಿ ಪಡೆದವರು ಪ್ರಮಾಣಪತ್ರಗಳಿಗೆ ಸೀಮಿತವಾಗದೇ ಜ್ಞಾನವನ್ನು ಸಮಾಜದ ಒಳಿತಿಗೆ ವಿನಿಯೋಗಿಸಬೇಕು’ ಎಂದರು.

ಮುಕ್ತ ವಿ.ವಿ. ಕುಲಸಚಿವ ಪ್ರೊ.ಎಸ್‌.ಕೆ. ನವೀನ್‌ಕುಮಾರ್, ಪರೀಕ್ಷಾಂಗ ಕುಲಸಚಿವ ಸಿ.ಎಸ್. ಆನಂದ್ ಕುಮಾರ್ ಇದ್ದರು.

ಘಟಿಕೋತ್ಸವಕ್ಕೆ ಗೈರು: ಗೌರವ ಡಾಕ್ಟರೇಟ್ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ವಿ.ವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರು ಶನಿವಾರ ಘಟಿಕೋತ್ಸವಕ್ಕೆ ಗೈರಾಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರಾದ ಸೋಸಲೆ ಮಹೇಶ್, ಪ್ರಾಚಿ ಗೌಡ, ಮಾಲತಿ ಹಾಗೂ ಮಂಜುನಾಥ್ ಗೈರು ಹಾಜರಾದರು. ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಕೂಡ ಬಂದಿರಲಿಲ್ಲ.

ಎಂಟು ಮಂದಿಗೆ ಗೌರವ ಡಾಕ್ಟರೇಟ್‌

ಕೆಎಸ್‌ಒಯು 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಎಂಟು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಬೆಂಗಳೂರಿನ ಹರ್ಷ ಸಮೂಹ ಸಂಸ್ಥೆ ಅಧ್ಯಕ್ಷ ಎಸ್‌.ಶಿವಕುಮಾರ್‌ ತುಮಕೂರಿನ ಕಿಡ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ಮತ್ತು ಕಾರ್ಯದರ್ಶಿ ಸತೀಶ್ ಕುಮಾರ್ ಡಿ.ಕೆಗ್ಗೆರೆ ಮೈಸೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಲಕ್ಷ್ಮೀ ಮೈಸೂರಿನ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಭಾಷ್ಯಂ ಸ್ವಾಮೀಜಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು ಹಾಸನದ ಜೋತಿಷಶಾಸ್ತ್ರಜ್ಞ ಬಿ.ಎಸ್.ನಾಗಭೂಷಣ ಅಟ್ರಿ ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ಬೀದರ್‌ನ ಐಟಿಐ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶಿವಶಂಕರ ಟೊಕರೆ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.