ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರ್ಚಂದ್ ಗೆಹಲೋತ್, ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಸೇರಿದಂತೆ 18 ಪ್ರತಿವಾದಿಗಳಿಗೆ ಹೈಕೋರ್ಟ್ ಜೂನ್ 26ರಂದು ನೋಟಿಸ್ ಜಾರಿಗೊಳಿಸಿದೆ.
ಕೆಎಸ್ಒಯು ಹಿಂದಿನ ಕುಲಪತಿಯಾಗಿದ್ದ, ಪ್ರಸ್ತುತ ವಿಟಿಯು ಕುಲಪತಿ ಆಗಿರುವ ಎಸ್.ವಿದ್ಯಾಶಂಕರ್, ಹಿಂದಿನ ಹಣಕಾಸು ಅಧಿಕಾರಿ ಸುಮತಿ ಆರ್.ಗೌಡ, ಹಿಂದಿನ ಕುಲಸಚಿವರಾದ ಖಾದರ್ ಪಾಷಾ, ಕೆ.ಎಲ್.ಎನ್. ಮೂರ್ತಿ, ಕೆ.ಬಿ. ಪ್ರವೀಣ, ವಿಶ್ವವಿದ್ಯಾಲಯದ ಹಣಕಾಸು ಇಲಾಖೆ, ರಾಜ್ಯ ಲೆಕ್ಕಪತ್ರ ಹಾಗೂ ಲೆಕ್ಕ ತಪಾಸಣಾ ಇಲಾಖೆ, ಲೋಕಾಯುಕ್ತ ಎಡಿಜಿಪಿ, ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳಿಗೂ ನೋಟಿಸ್ ನೀಡಲಾಗಿದೆ.
‘ವಿದ್ಯಾಶಂಕರ್ ತಮ್ಮ ಅವಧಿಯಲ್ಲಿ ಅನಧಿಕೃತ ಬ್ಯಾಂಕ್ ಖಾತೆ ತೆರೆದು ಸಂಸ್ಥೆಯ ಹಣ ದುರ್ಬಳಕೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕೋರಿ ಕೆಎಸ್ಒಯುನಿಂದ ಅಮಾನತುಗೊಂಡಿರುವ ಸಹಾಯಕ ಪ್ರಾಧ್ಯಾಪಕ ಎಚ್.ಕೆ.ಜಗದೀಶ್ ಬಾಬು 2023ರ ಸೆ. 15ರಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
‘ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 17ಎ ಅಡಿ ಈ ಪ್ರಕರಣದ ಎಫ್ಐಆರ್ ದಾಖಲಿಸಲು ಅನುಮತಿ ಕೋರಿ ಲೋಕಾಯುಕ್ತ ಅಧಿಕಾರಿಗಳು ಸಲ್ಲಿಸಿದ್ದ ಮನವಿಯನ್ನು ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲರು ತಿರಸ್ಕರಿಸಿದ್ದರು. ರಾಜ್ಯಪಾಲರ ನಡೆ ಪ್ರಶ್ನಿಸಿ ಹಾಗೂ ತನಿಖೆಗೆ ಅನುಮತಿ ಕೋರಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ’ ಎಂದು ದೂರುದಾರ ಜಗದೀಶ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.