ADVERTISEMENT

ಮೈಸೂರಿನಲ್ಲಿ ಕಾನೂನು, ಸುವ್ಯವಸ್ಥೆ ಕುಸಿತ: ಸಿದ್ದರಾಮಯ್ಯ

ಪೊಲೀಸರ ಕಾರ್ಯವೈಖರಿ, ಸರ್ಕಾರದ ಸಚಿವರ ನಡವಳಿಕೆಗಳಿಗೆ ಕಿಡಿಕಿಡಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 3:37 IST
Last Updated 2 ಸೆಪ್ಟೆಂಬರ್ 2021, 3:37 IST
ಜಲದರ್ಶಿನಿಯಲ್ಲಿ ಬುಧವಾರ ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಜೊತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚರ್ಚಿಸಿದರು. ಪುಷ್ಪಾ ಅಮರನಾಥ, ತನ್ವೀರ್‌ ಸೇಠ್‌, ಎಚ್‌.ಸಿ.ಮಹದೇವಪ್ಪ ಇದ್ದರು
ಜಲದರ್ಶಿನಿಯಲ್ಲಿ ಬುಧವಾರ ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಜೊತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚರ್ಚಿಸಿದರು. ಪುಷ್ಪಾ ಅಮರನಾಥ, ತನ್ವೀರ್‌ ಸೇಠ್‌, ಎಚ್‌.ಸಿ.ಮಹದೇವಪ್ಪ ಇದ್ದರು   

ಮೈಸೂರು: ಕಾನೂನು ಮತ್ತು ಸುವ್ಯವಸ್ಥೆ ಮೈಸೂರಿನಲ್ಲಿ ಸಂಪೂರ್ಣ ಕುಸಿದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಕೊಲೆ, ಸುಲಿಗೆ, ಕಳ್ಳತನ, ದರೋಡೆ, ಅತ್ಯಾಚಾರಗಳಂತಹ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಅದರಲ್ಲೂ ಸಾಮೂಹಿಕ ಅತ್ಯಾಚಾರದಂತಹ ಹೇಯ ಕೃತ್ಯ ನಡೆದು, ಮೈಸೂರಿಗೆ ಕಪ್ಪು ಚುಕ್ಕೆ ಬಂದಿದೆ. ಹೀಗಿದ್ದರೂ, ಸರ್ಕಾರ ಪೊಲೀಸರಿಗೆ ಚಾಟಿ ಬೀಸದೇ ಬೆನ್ನು ತಟ್ಟುತ್ತಿದೆ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಒಂದು ವೇಳೆ ಸರ್ಕಾರ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವುದು ನಿಶ್ಚಿತ. ವಿವಿಧ ತನಿಖಾ ಸಂಸ್ಥೆಗಳಿಂದ ಉನ್ನತ ಮಟ್ಟದ ತನಿಖೆ ನಡೆಸಲು ಆಗ್ರಹಿಸುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.

ADVERTISEMENT

ಶಾಸಕ ಜಿ.ಟಿ.ದೇವೇಗೌಡ ಹಾಗೂ ಅವರ ಪುತ್ರ ಇಬ್ಬರಿಗೂ ಟಿಕೆಟ್ ನೀಡುತ್ತೇವೆ ಎಂದು ಹೇಳಿಲ್ಲ. ಟಿಕೆಟ್ ವಿಷಯವನ್ನು ಹೈಕಮಾಂಡ್‌ನ್ನು ಕೇಳುವಂತೆ ಹೇಳಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಅಡುಗೆ ಅನಿಲದ ದರವು ₹ 414 ಇತ್ತು. ಈಗ ₹ 886ಕ್ಕೆ ಹೆಚ್ಚಿದೆ. ಪ್ರಧಾನಿ ಮೋದಿ ಅವರು ಹೇಳಿದ ಅಚ್ಚೇ ದಿನ್‌ ಇದೆ ಎಂದು ವ್ಯಂಗ್ಯವಾಡಿದರು.

‘ಜಾತಿಗಣತಿ ವರದಿ ನಾನು ಮುಖ್ಯಮಂತ್ರಿಯಾಗಿದ್ದಾಗ ರೂಪುಗೊಂಡಿರಲೇ ಇಲ್ಲ. ಹಾಗಾಗಿ, ಅದನ್ನು ಬಿಡುಗಡೆ ಮಾಡಲಿಲ್ಲ ಎಂಬ ಹಾಗೂ ಅದನ್ನು ಸೋರಿಕೆ ಮಾಡಿದೆ ಎಂಬ ಆರೋಪಗಳು ಬಾಲಿಶವಾದದ್ದು’ ಎಂದರು.

ಶಾಸಕ ತನ್ವೀರ್ ಸೇಠ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕೆಪಿಸಿಸಿ ವಕ್ತರರಾದ ಎಂ.ಲಕ್ಷ್ಮಣ್, ಎಚ್.ಎ.ವೆಂಕಟೇಶ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಡಾ.ಎಚ್.ಸಿ.ಮಹದೇವಪ್ಪ, ಎಂ.ಕೆ.ಸೋಮಶೇಖರ್ ಇದ್ದರು.

ಪೊಲೀಸರಿಗೆ ತರಾಟೆ: ಸಿದ್ದರಾಮಯ್ಯ ಅವರು ಇಲ್ಲಿನ ಜಲದರ್ಶಿನಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಪಡೆದುಕೊಂಡರು.

ಈ ವೇಳೆ ಅವರು ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಆರೋಪಿಗಳನ್ನು ಬಂಧಿಸುವುದು ದೊಡ್ಡದ್ದಲ್ಲ. ಅಪರಾಧಗಳು ನಡೆಯದಂತೆ ಎಚ್ಚರವಹಿಸುವುದು ದೊಡ್ಡದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.