ಮೈಸೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರಬಲ ಹಾಗೂ ಸಾಂಘಿಕ ಹೋರಾಟಕ್ಕಾಗಿ ಒಂದೇ ವೇದಿಕೆ ರೂಪಿಸಿಕೊಳ್ಳಲು ರೈತ ಸಂಘಟನೆಗಳು ಕಾರ್ಯತಂತ್ರ ರೂಪಿಸುತ್ತಿವೆ.
ವಿವಿಧ ರೈತ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುವ ಬದಲು, ರಾಜ್ಯದ ಎಲ್ಲೆಡೆ ಜೊತೆಯಾಗಿ ಆಂದೋಲನ ರೂಪಿಸುವುದು ಇದರ ಉದ್ದೇಶ. ಈ ಮೂಲಕ ಕಾಯ್ದೆ ವಾಪಸ್ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಗುರಿ ಹೊಂದಲಾಗಿದೆ.
ಮೈಸೂರು–ಚಾಮರಾಜನಗರ ಜಿಲ್ಲೆಯಲ್ಲಿ ಎರಡು ದಶಕಗಳಿಂದ ಸುಸ್ಥಿರ ಸಾವಯವ ಕೃಷಿಕರ ಒಕ್ಕೂಟ ನಡೆಸುತ್ತಿರುವ ಸಂಘಟನೆಯ ಪದಾಧಿಕಾರಿಗಳು, ‘ನಮ್ಮೂರ ಭೂಮಿ ನಮಗಿರಲಿ’ ಎಂಬ ವೇದಿಕೆಯಡಿ ರಾಜ್ಯದಲ್ಲಿರುವ ಎಲ್ಲ ರೈತ ಸಂಘಟನೆಗಳನ್ನು ಒಗ್ಗೂಡಿಸಲು ಪ್ರಯತ್ನ ನಡೆಸಿದ್ದಾರೆ.
ಒಕ್ಕೂಟದ ವಿ.ಗಾಯತ್ರಿ ಸಂಯೋಜಕಿಯಾಗಿ ಒಂದು ತಿಂಗಳಿಂದಲೂ ಕಸರತ್ತು ನಡೆಸಿದ್ದು, ಹಲವು ಸಂಘಟನೆಗಳ ಜತೆ ಚರ್ಚಿಸಿದ್ದಾರೆ. ಈಗಾಗಲೇ ಕೆಲ ಸಂಘಟನೆಗಳು ಆಂದೋಲನಕ್ಕೆ ರಾಜ್ಯ ವ್ಯಾಪಿ ಸಾಥ್ ನೀಡಲು ಸಮ್ಮತಿಸಿವೆ.
‘ಕೆಲವು ಸಂಘಟನೆಗಳು ವೇದಿಕೆಯಲ್ಲಿ ಗುರುತಿಸಿಕೊಂಡಿವೆ. ತಿದ್ದುಪಡಿ ಕಾಯ್ದೆ ವಿರುದ್ಧ ಸೋಮವಾರದಿಂದಲೇ (ಆ.3) ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿವೆ. ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ, ಉಳುವವರಿಗೇ ಭೂಮಿ; ಉಳ್ಳವರಿಗಲ್ಲ’ ಎಂಬ ಎರಡು ಘೋಷ ವಾಕ್ಯದ ನಾಮಫಲಕ ಚಳವಳಿಗೂ ಚಾಲನೆ ನೀಡಲಿವೆ’ ಎಂದು ಗಾಯತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಲ್ಲ ಸಂಘಟನೆಗಳ ಜೊತೆಗೂ ಮಾತುಕತೆ ನಡೆದಿದೆ. ಆ.8ರ ವೇಳೆಗೆ ಅಂತಿಮ ರೂಪ ಸಿಗಲಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿ ಹಳ್ಳಿಯಲ್ಲೂ ನಾಮಫಲಕ ಚಳವಳಿ ನಡೆಸುವ ಜೊತೆಯಲ್ಲೇ, ಪ್ರತಿ ರೈತರ ಮನೆಯಿಂದಲೂ ಮುಖ್ಯಮಂತ್ರಿಗೆ ಪತ್ರ ಬರೆಸುವ ಮೂಲಕ ಪೋಸ್ಟ್ ಕಾರ್ಡ್ ಆಂದೋಲನ ನಡೆಸಲಾಗುವುದು. ಸರ್ಕಾರ ಕಾಯ್ದೆ ವಾಪಸ್ ಪಡೆಯುವ ತನಕವೂ ಈ ಹೋರಾಟವನ್ನು ನಿರಂತರವಾಗಿ ನಡೆಸಲಿದ್ದೇವೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.