
ಮೈಸೂರು: ‘ಎಲ್ಐಸಿ (ಭಾರತೀಯ ಜೀವ ವಿಮಾ ನಿಗಮ) ಸ್ಥಾಪನೆಯಾಗಿ 70 ವರ್ಷಗಳಾಗಿದ್ದು, ಇದರ ಆಚರಣೆ ಕಾರ್ಯಕ್ರಮವನ್ನು ಜ.19ರಂದು ಎಲ್ಲ ಎಲ್ಐಸಿ ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ವಿಮಾ ನಿಗಮ ನೌಕರರ ಸಂಘದ ಮೈಸೂರು ವಿಭಾಗದ ಅಧ್ಯಕ್ಷ ಎಸ್.ಕೆ. ರಾಮು ತಿಳಿಸಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ನಗರದ ಬನ್ನಿಮಂಟಪದ ಪ್ರಧಾನ ಕಚೇರಿ ಹಾಗೂ ಉಪ ಕಚೇರಿಗಳಲ್ಲೂ ಕಾರ್ಯಕ್ರಮ ನಡೆಯಲಿದೆ’ ಎಂದರು.
‘ಅಂದು ಮಧ್ಯಾಹ್ನ ಊಟದ ವೇಳೆ ನೌಕರರು, ಅಧಿಕಾರಿಗಳು ಗೇಟ್ ಮೀಟಿಂಗ್ನಲ್ಲಿ ಪಾಲ್ಗೊಂಡು ಎಲ್ಐಸಿಯನ್ನು ಇನ್ನಷ್ಟು ಬಲವರ್ಧನೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸುವರು. ಕಳೆದ 25 ವರ್ಷಗಳಿಂದ ಎಲ್ಐಸಿ ಹಲವಾರು ಖಾಸಗಿ ವಿಮಾ ಕಂಪನಿಗಳ ಪ್ರವೇಶ ಕಾರಣ ಸಾಕಷ್ಟು ಸವಾಲು ಎದುರಿಸುತ್ತಿದೆ. ಹೀಗಾಗಿ ಇದನ್ನು ನಿಭಾಯಿಸುವ ಬಗ್ಗೆ ಚರ್ಚಿಸಲಾಗುವುದು’ ಎಂದು ಹೇಳಿದರು.
‘ಎಲ್ಐಸಿಯಲ್ಲಿ ಹೂಡಿದ, ಹೂಡಲಾಗುವ ಹಣ ಸುಭದ್ರ ಎಂಬುದನ್ನು ಗ್ರಾಹಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಸಹಾ ನಡೆಯಲಿದೆ. ಸದ್ಯ ಎಲ್ಐಸಿಯಲ್ಲಿ ಸುಮಾರು 40ಸಾವಿರ ಸಿಬ್ಬಂದಿ ಇದ್ದಾರೆ. 14 ಲಕ್ಷ ಏಜೆಂಟರಿದ್ದಾರೆ. ಹೀಗಾಗಿ ಈಗಿನ ಸ್ಪರ್ಧೆಗಳಲ್ಲಿ ಇವರನ್ನು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನೂ ಸಮಾಲೋಚಿಸಲಾಗುವುದು’ ಎಂದರು.
ಪದಾಧಿಕಾರಿಗಳಾದ ಸರ್ವಮಂಗಳಾ, ಎಚ್. ವಿಜಯಕುಮಾರ್, ವಿಲಿಯಂ ಸೆರಾವೋ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.