
ಮೈಸೂರು: ‘ಇತ್ತೀಚಿನ ದಿನಗಳಲ್ಲಿ ಸದಭಿರುಚಿ ಇಳಿಮುಖವಾಗುತ್ತಿದ್ದು, ದೇಶಪ್ರೇಮವೂ ಕ್ಷೀಣಿಸುತ್ತಿದೆ’ ಎಂದು ಸಾಹಿತಿ ಸಿ.ಪಿ. ಕೃಷ್ಣಕುಮಾರ್ ವಿಷಾದಿಸಿದರು.
ಸ್ವಜನ್ಯ ಕಲಾವೇದಿಕೆ, ಭಾಗೀರಥಿ ಪ್ರಕಾಶನ, ಶಾರದಾ ಪ್ರಕಾಶನದಿಂದ ಇಲ್ಲಿನ ಗೋಪಾಲಸ್ವಾಮಿ ಪಿಯು ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಶಂಕರನಾರಾಯಣ ಅವರ ‘ಪುರುಷಾರ್ಥ’ ಕಾದಂಬರಿ ಹಾಗೂ ಎಸ್. ಶಿಶಿರಂಜನ್ ವಿರಚಿತ ‘ಇದೆಂಥಾ ದೇಶ ಪ್ರೇಮ ರೀ?!’ ನಾಟಕ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಸ್ತುತ ಬಹುಮಾಧ್ಯಮಗಳಲ್ಲಿ ಅಶ್ಲೀಲದ ಮೆರವಣಿಗೆ ನಡೆಯುತ್ತಿದೆ’ ಎಂದರು.
‘ಸಾಹಿತ್ಯ ಕೃತಿಗಳು ಸಂತೋಷ ಮತ್ತು ಸಂದೇಶ ಕೊಡುವಂತಿರಬೇಕು’ ಎಂದು ಹೇಳಿದರು.
ಕೃತಿಗಳನ್ನು ಬಿಡುಗಡೆ ಮಾಡಿದ ವಿದ್ವಾಂಸ ಕೆ. ಅನಂತರಾಮು, ‘ಕೆಲವು ಕೃತಿಗಳನ್ನು ಕೈತೊಳೆದು ಮುಟ್ಟಬೇಕು. ಕೆಲವನ್ನು ಮುಟ್ಟಿದ ನಂತರ ಕೈತೊಳೆಯಬೇಕು. ಇಲ್ಲಿ ಬಿಡುಗಡೆಯಾದ ಎರಡೂ ಕೃತಿಗಳು ಕೈತೊಳೆದು ಮುಟ್ಟುವಂಥವು. ಇವು ನವೋದಯ ಯುಗದ ಭಾವದಂತಿವೆ’ ಎಂದು ಹೇಳಿದರು.
‘ಪ್ರಸ್ತುತ ದೇಶ ಪ್ರೇಮದ ಕೊರತೆ ಕಾಡುತ್ತಿದೆ. ಎಲ್ಲಾ ಸಮಸ್ಯೆಗಳಿಗೂ ಇದೇ ಕಾರಣವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಪುರುಷಾರ್ಥ’ ಕಾದಂಬರಿ ಪರಿಚಯಿಸಿದ ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್, ‘ಈ ಕಾದಂಬರಿಯ ಆಂತರಿಕ ಚೌಕಟ್ಟು ಚೆನ್ನಾಗಿದೆ. ಯಾವುದೇ ಮಸಾಲೆ ಹಾಕಿಲ್ಲ. ಟಿವಿ ಧಾರಾವಾಹಿಗಳಂತೆ ಖಳನಾಯಕ, ನಾಯಕಿಯರಿಲ್ಲ. ಇಡೀ ಕಾದಂಬರಿ ಮನಸ್ಸಿಗೆ ಮುದ ನೀಡುವಂತಿದೆ. ಶೃಂಗಾರವಿದೆ. ಅಶ್ಲೀಲತೆ ಇಲ್ಲ. ಪರಿಶುದ್ಧ ಪ್ರೀತಿಯ, ಸದಭಿರುಚಿಯ ಕಾದಂಬರಿ ಇದಾಗಿದೆ’ ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಾರಾಜ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಮುರುಳಿ ಮುಖ್ಯ ಅತಿಥಿಯಾಗಿದ್ದರು. ಕಾದಂಬರಿಕಾರ ಡಿ.ಎನ್. ಕೃಷ್ಣಮೂರ್ತಿ ಇದ್ದರು.
ತಂದೆಯ ಕಾದಂಬರಿ ಹಾಗೂ ಪುತ್ರನ ನಾಟಕ ಕೃತಿ ಒಟ್ಟಿಗೆ ಬಿಡುಗಡೆಯಾಗಿದ್ದು ಈ ಕಾರ್ಯಕ್ರಮದ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.