ADVERTISEMENT

ಹೊರ ರಾಜ್ಯದವರ ಪ್ರವೇಶಕ್ಕೆ ತಾತ್ಕಾಲಿಕ ದಿಗ್ಬಂಧನ ವಿಧಿಸಿ; ಪ್ರತಾಪ್ ಸಿಂಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 11:32 IST
Last Updated 21 ಮಾರ್ಚ್ 2020, 11:32 IST
ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ   

ಮೈಸೂರು: ‘ಹೊರ ರಾಜ್ಯದವರ ಪ್ರವೇಶಕ್ಕೆ ತಾತ್ಕಾಲಿಕ ದಿಗ್ಬಂಧನ ವಿಧಿಸಬೇಕು’ ಎಂದು ಸಂಸದ ಪ್ರತಾಪಸಿಂಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ನೆರೆಯ ಕೇರಳದಲ್ಲಿ ದಿನದಿಂದ ದಿನಕ್ಕೆ ಕೋವಿಡ್–19 ರೋಗ ಪೀಡಿತರು, ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ರಾಜ್ಯದೊಂದಿಗೆ ಮೈಸೂರು, ಕೊಡಗು ಜಿಲ್ಲೆಗಳು ಗಡಿ ಹಂಚಿಕೊಂಡಿದ್ದು, ಕೇರಳದವರು ರಾಜ್ಯ ಪ್ರವೇಶಿಸದಂತೆ ನಿಷೇಧ ಹೇರಬೇಕು’ ಎಂದು ಕೋರಿದರು.

‘ಕೆಲವೊಂದು ಸಣ್ಣ ಉದ್ಯಮಗಳು ಇಂದಿಗೂ ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜತೆ ಚರ್ಚಿಸಿ, ಜಿಲ್ಲಾಡಳಿತದಿಂದ ಕಾರ್ಯಾಚರಿಸದಂತೆ ಕಟ್ಟೆಚ್ಚರದ ಸುತ್ತೋಲೆ ಹೊರಡಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಾಪಸಿಂಹ ಉತ್ತರಿಸಿದರು.

ADVERTISEMENT

‘ಕೊಡಗಿನಲ್ಲಿ ಕೋವಿಡ್–19 ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದಾರೆ. ಜಿಲ್ಲಾಡಳಿತ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಈ ಹಂತದಲ್ಲಿ ಸ್ಥಳೀಯರ ಸಹಕಾರವೂ ಮುಖ್ಯವಾದುದು’ ಎಂದು ಹೇಳಿದರು.

‘ದೇಶದ ಜನರ ಆರೋಗ್ಯ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದಾರೆ. ದೇಶವೇ ಸ್ಪಂದಿಸುತ್ತಿದೆ. ಅದೇ ರೀತಿ ಮೈಸೂರಿಗರು ಸ್ಪಂದಿಸಬೇಕಿದೆ. ಹಿರಿಯರು ಎಚ್ಚರಿಕೆಯಿಂದಿರಬೇಕು’ ಎಂದು ಸಂಸದರು ಇದೇ ಸಂದರ್ಭ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.