ನಂಜನಗೂಡು: ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ನಡೆದ ಚುನಾವಣೆಯಲ್ಲಿ ಬಹುಮತಗಳಿಸಿದ ಬಿಜೆಪಿಯ ಎಚ್.ಎಸ್.ಮಹದೇವಸ್ವಾಮಿ ಪ್ರಥಮ ನಗರಸಭೆಯ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷೆಯಾಗಿ ನಾಗಮಣಿ ಶಂಕರಪ್ಪ ಗುರುವಾರ ಶಾಸಕ ಬಿ.ಹರ್ಷವರ್ಧನ್ ಸಮ್ಮಖದಲ್ಲಿ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಎಚ್.ಎಸ್.ಮಹದೇವಸ್ವಾಮಿ, ‘ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬಂದಿವೆ. ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಧ್ಯವರ್ತಿಗಳಿಗೆ ಆಸ್ಪದ ನೀಡದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ನಗರಸಭೆಯ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಕೆಟ್ಟು ಹೋಗಿರುವ ಬಗ್ಗೆ ಮಾಹಿತಿ ಇದೆ. ಅದನ್ನು ಸರಿಪಡಿಸಲಾಗುವುದು. ನಗರದ ಸ್ವಚ್ಛತೆ, ಕುಡಿಯುವ ನೀರು ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶಾಸಕರು ಹಾಗೂ ಸಂಸದರ ಸಹಕಾರ ಪಡೆದು ನನೆಗುದಿಗೆ ಬಿದ್ದಿರುವ ಒಳಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸುತ್ತೇನೆ’ ಎಂದು ಹೇಳಿದರು.
ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ ಮಾತನಾಡಿ, ‘ಉಪ್ಪಾರ ಸಮುದಾಯಕ್ಕೆ ಆದ್ಯತೆ ನೀಡಿ ನನ್ನನ್ನು ಉಪಾಧ್ಯಕ್ಷೆಯನ್ನಾಗಿ ಆಯ್ಕೆಯಾಗಲು ಕಾರಣರಾದ ಶಾಸಕ ಬಿ.ಹರ್ಷವರ್ಧನ್ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಗರದ ಅಭಿವೃದ್ದಿಗೆ ಅಧ್ಯಕ್ಷರೊಂದಿಗೆ ಸಹಕಾರ ನೀಡಿ ಶ್ರಮಿಸುತ್ತೇನೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಮುಖಂಡ ಕೆ.ಕೆ.ಜಯದೇವ್, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಮಹೇಶ್, ನಗರಾಧ್ಯಕ್ಷ ಶ್ರೀನಿವಾಸ ರೆಡ್ಡಿ, ನಗರಸಭಾ ಸದಸ್ಯರಾದ ಮೀನಾಕ್ಷಿ ನಾಗರಾಜು, ಮಹದೇವಮ್ಮ ಬಾಲಚಂದ್ರು, ವಿಜಯಲಕ್ಷ್ಮಿ ಕುಮಾರ್, ಕಪಿಲೇಶ್, ಮಂಗಳಮ್ಮ, ಮುಖಂಡರಾದ ಬಾಲಚಂದ್ರು, ಶಂಕರಪ್ಪ, ಮಹೇಶ್, ಮಧುರಾಜ್, ಮಹದೇವಸ್ವಾಮಿ, ಶ್ರೀಕಂಠ, ಎಪಿಎಂಸಿ ಸದಸ್ಯ ಗುರುಸ್ವಾಮಿ, ತಾ.ಪಂ ಸದಸ್ಯರಾದ ಬಿ.ಎಸ್.ರಾಮು, ನಗರಸಭಾ ಆಯುಕ್ತ ಕರಿಬಸವಯ್ಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.