ಮೈಸೂರು: ಅ. 15ರಂದು ಚಾಮುಂಡಿಬೆಟ್ಟದಲ್ಲಿ ಮಹಿಷ ದಸರೆ ಆಚರಣೆ ನಿಶ್ಚಿತ ಎಂದು ಸಾಹಿತಿ ಕೆ.ಎಸ್.ಭಗವಾನ್ ತಿಳಿಸಿದರು.
‘ಮಹಿಷ ಕೆಟ್ಟ ವ್ಯಕ್ತಿಯಾಗಿದ್ದರೆ ಆತನ ಹೆಸರನ್ನು ಒಂದು ಊರಿಗೆ ಇಡುತ್ತಿರಲಿಲ್ಲ. ಅವನೊಬ್ಬ ಬೌದ್ಧ ಸಂನ್ಯಾಸಿ. ಅವನ ಹಬ್ಬವನ್ನು ನಾವು ಮಾಡುತ್ತೇವೆ. ಇಷ್ಟವಿದ್ದವರು ಬನ್ನಿ, ಇಲ್ಲದಿದ್ದರೆ ಸುಮ್ಮನಿರಿ’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ವೇಶ್ಯೆಗೆ ಹುಟ್ಟಿದವರು ಶೂದ್ರರು ಎಂದು ಆರ್ಯಧರ್ಮ ಹೇಳುತ್ತದೆ. ಇಂತಹ ಧರ್ಮ ನಮಗೆ ಬೇಕಾಗಿಲ್ಲ. ಅಸುರ ಎಂದರೆ ಮದ್ಯಪಾನ ಮಾಡದವನು ಎಂದರ್ಥ. ಇತಿಹಾಸದ ಕುರಿತು ಸರಿಯಾಗಿ ಅರ್ಥೈಸಿಕೊಳ್ಳಿ. ಚರ್ಚೆಗೆ ಬನ್ನಿ’ ಎಂದು ಸವಾಲೆಸೆದರು.
ನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರಗುರು ಮಾತನಾಡಿ, ‘ನನ್ನ ಹೆಸರು ಮಹಿಷಚಂದ್ರಗುರು ಎಂದು. ಆದರೆ, ನಮ್ಮ ಮೇಷ್ಟ್ರು ಅದನ್ನು ಮಹೇಶ್ಚಂದ್ರಗುರು ಎಂದು ಮಾಡಿದರು. ನಾವು ಮಹಿಷನ ಹಬ್ಬ ಮಾಡದೇ ಗೋಡ್ಸೆ, ಸಾವರ್ಕರ್ ಹಬ್ಬ ಮಾಡಬೇಕೇ’ ಎಂದು ಪ್ರಶ್ನಿಸಿದರು.
ವಿಂದ್ಯಾಪರ್ವತದಲ್ಲಿ ಮಹಿಷನ ದೇಗುಲ ಇದೆ. ‘ಪಕ್ಷ’ ಹಬ್ಬದ ಆಚರಣೆ ಮಹಿಷನ ಕೊಡುಗೆ. ಆತ ಒಬ್ಬ ಶಾಂತಿದೂತ. ಆತನನ್ನು ವಿರೋಧಿಸುವವರು ಕಂತ್ರಿಗಳು. ಒಂದು ವೇಳೆ ಸರ್ಕಾರ ತಡೆಯೊಡ್ಡಿದರೆ ಸರ್ಕಾರವನ್ನೇ ಬುಡಮೇಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.