ಮೈಸೂರು: ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಗರ/ಪಟ್ಟಣಗಳಲ್ಲಿನ ಕಟ್ಟಡ ಕಾರ್ಮಿಕರು, ನಿರಾಶ್ರಿತರು, ಬಡ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಮೈಮುಲ್ ಶುಕ್ರವಾರ ಚಾಲನೆ ನೀಡಿತು.
ಮೈಸೂರಿನ ಡಾ.ರಾಜ್ಕುಮಾರ್ ರಸ್ತೆಯಲ್ಲಿನ ಹುಡ್ಕೋ ಕಾಲೊನಿಯಲ್ಲಿ ಸಾಂಕೇತಿಕವಾಗಿ ಹಾಲು ವಿತರಿಸಿತು. ಜಿಲ್ಲೆಯ ಎಲ್ಲೆಡೆ ಹಾಲು ವಿತರಣೆ ನಡೆಯಿತು.
ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಲಾಕ್ಡೌನ್ ಜಾರಿಯಲ್ಲಿದ್ದು, ಬಡವರು, ಕೂಲಿ ಕಾರ್ಮಿಕರು ದುಡಿಯಲು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹವರ ನೆರವಿಗೆ ಬರಲು ಸರ್ಕಾರ ಮುಂದಾಗಿ ಈ ಯೋಜನೆ ರೂಪಿಸಿದೆ ಎಂದು ಮೈಮುಲ್ನ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಅಶೋಕ್ ಮಾಹಿತಿ ನೀಡಿದರು.
‘ಮಹಾನಗರ ಪಾಲಿಕೆ, ಸ್ಲಂ ಬೋರ್ಡ್, ಲೇಬರ್ ಕಮಿಷನರ್, ಡಿಯುಡಿಸಿ ಸೆಲ್ ಮೈಸೂರಿನಲ್ಲಿ ಎಷ್ಟು ಹಾಲು ಬೇಕು ಎಂಬ ಬೇಡಿಕೆ ಪಟ್ಟಿ ನೀಡುತ್ತವೆ. ಇದರಂತೆ ಉಳಿದೆಡೆ ನಗರಸಭೆ/ಪುರಸಭೆ ಸಿಬ್ಬಂದಿ ಪಟ್ಟಿ ಕೊಡುತ್ತಾರೆ. ಪ್ರಸ್ತುತ 30 ಸಾವಿರ ಲೀಟರ್ ಹಾಲಿಗೆ ಬೇಡಿಕೆಯಿದೆ. ಇಷ್ಟನ್ನು ನಾವು ಕೊಡುತ್ತಿದ್ದೇವೆ. ಸರ್ಕಾರ ನಮಗೆ ಒಂದು ಲೀಟರ್ಗೆ ₹ 36 ಕೊಡಲಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.