
ಮೈಸೂರು: ‘ಐಟಿಸಿ ಕಂಪನಿಯು ಮೈಸೂರು ಜಿಲ್ಲೆಯ ತಂಬಾಕು ಬೆಳೆಗಾರರಿಂದ ನ್ಯಾಯಯುತ ಬೆಲೆ ಮೂಲಕ ಹರಾಜಿನಲ್ಲಿ ಉತ್ಪನ್ನ ಕೊಳ್ಳಬೇಕು. ರೈತರಿಗೆ ಅನ್ಯಾಯವಾದರೆ ಕಂಪನಿಯ ಗೋದಾಮುಗಳನ್ನು ಜಪ್ತಿ ಮಾಡಲಾಗುವುದು’ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಎಚ್ಚರಿಸಿದರು.
ನಗರದಲ್ಲಿ ಸೋಮವಾರ ತಂಬಾಕು ಬೆಳೆಗಾರರು, ಜಿಲ್ಲಾಡಳಿತ, ತಂಬಾಕು ಮಂಡಳಿ ಹಾಗೂ ಕಾರ್ಖಾನೆ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು. ‘ ಹರಾಜಿನಲ್ಲಿ ಬೆಲೆ ಕುಸಿತದಿಂದ ಈಗಾಗಲೇ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಕಂಪನಿಯು ಉದ್ದೇಶಪೂರ್ವಕವಾಗಿ ಕಡಿಮೆ ಬೆಲೆಗೆ ಹರಾಜು ಮಾಡುವುದು, ಕಡಿಮೆ ಉತ್ಪನ್ನ ಕೊಳ್ಳುವುದು ಸರಿಯಲ್ಲ. ಹರಾಜು ಆರಂಭಗೊಂಡ ದಿನ ಇದ್ದ ಬೆಲೆ ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಹರಾಜು ನಡೆಸಬೇಕು’ ಎಂದು ಸೂಚಿಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ‘ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ಮಟ್ಟದಲ್ಲಿ ತಂಬಾಕು ಉತ್ಪನ್ನಗಳಿಗೆ ಯಾವ ಪ್ರಮಾಣದ ತೆರಿಗೆ ಇದೆಯೋ ಅಷ್ಟೇ ಪ್ರಮಾಣದ ತೆರಿಗೆಯನ್ನು ದೇಶದಲ್ಲಿ ವಿಧಿಸುತ್ತಿದೆ. ಹೀಗಾಗಿ ತೆರಿಗೆಯಲ್ಲಿ ವ್ಯತ್ಯಾಸವಾಗದು. ರೈತರನ್ನು ತಂಬಾಕಿನಿಂದ ಬೇರೆ ಬೆಳೆಗಳಿಗೆ ಪರಿವರ್ತಿಸುವ ಕುರಿತು ಪೈಲಟ್ ಯೋಜನೆಗಳ ಅವಶ್ಯಕತೆ ಇದೆ. ಈ ಸಂಬಂಧ ಚರ್ಚೆಗೆ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ಕರೆದೊಯ್ಯಲಾಗುವುದು’ ಎಂದರು.
ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಹರಾಜಿನಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ರೈತರು ಜಿಲ್ಲಾಡಳಿತದ ಗಮನಕ್ಕೆ ತಂದರು. ಶಾಸಕರಾದ ಜಿ.ಡಿ. ಹರೀಶ್ ಗೌಡ, ರವಿಶಂಕರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ. ಸಿಇಒ ಯುಕೇಶ್ಕುಮಾರ್, ರಾಜ್ಯ ರೈತ ಸಂಘ, ತಂಬಾಕು ಮಂಡಳಿ ಹಾಗೂ ಐಟಿಸಿ ಕಂಪನಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.