ADVERTISEMENT

ಮೈಸೂರು ಕ್ಲಸ್ಟರ್ ಅಭಿವೃದ್ಧಿಗೆ ಪಣ: ಸಚಿವ ಪ್ರಿಯಾಂಕ್‌

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:30 IST
Last Updated 4 ಜುಲೈ 2025, 15:30 IST
ಮೈಸೂರಿನ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ‘ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌’ (ಕೆಡಿಇಎಂ) ಆಯೋಜಿಸಿದ್ದ ‘ಬಿಗ್‌ಟೆಕ್‌ ಷೋ’ ಅನ್ನು ಫ್ರಾನ್ಸ್‌ನ ರಾಯಭಾರಿ ಮಾರ್ಕ್ ಲ್ಯಾಮಿ ಉದ್ಘಾಟಿಸಿದರು
ಮೈಸೂರಿನ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ‘ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌’ (ಕೆಡಿಇಎಂ) ಆಯೋಜಿಸಿದ್ದ ‘ಬಿಗ್‌ಟೆಕ್‌ ಷೋ’ ಅನ್ನು ಫ್ರಾನ್ಸ್‌ನ ರಾಯಭಾರಿ ಮಾರ್ಕ್ ಲ್ಯಾಮಿ ಉದ್ಘಾಟಿಸಿದರು   

ಮೈಸೂರು: ‘ರಾಜ್ಯದ ಮಾಹಿತಿ ತಂತ್ರಜ್ಞಾನ (ಐ.ಟಿ) ರಫ್ತಿನಲ್ಲಿ ಮೈಸೂರು ವಲಯವು 2ನೇ ಸ್ಥಾನ ಪಡೆದಿದ್ದು, ಕಳೆದ ಸಾಲಿನ ಹಣಕಾಸು ವರ್ಷದಲ್ಲಿ ₹ 5,700 ಕೋಟಿ ವಹಿವಾಟು ನಡೆಸಿದೆ. ಮೈಸೂರು ಕ್ಲಸ್ಟರ್ ಅಭಿವೃದ್ಧಿಗೆ ಸರ್ಕಾರ ಪಣ ತೊಟ್ಟಿದೆ’ ಎಂದು ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. 

ನಗರದ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ‘ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌’ (ಕೆಡಿಇಎಂ) ಶುಕ್ರವಾರ ಆಯೋಜಿಸಿದ್ದ ‘ಬಿಗ್‌ಟೆಕ್‌ ಷೋ’ನಲ್ಲಿ ವರ್ಚುವಲ್‌ ಮೂಲಕ ಮಾತನಾಡಿದ ಅವರು, ‘ಮೈಸೂರು ರಾಜ್ಯದ ಸಾಂಸ್ಕೃತಿಕ ರಾಜಧಾನಿಯಷ್ಟೇ ಅಲ್ಲ, ಭವಿಷ್ಯದಲ್ಲಿ ದೇಶದ ಅತ್ಯುತ್ತಮ ತಂತ್ರಜ್ಞಾನದ ಭೂಸ್ವರೂಪವಾಗಿ ಬದಲಾಗಲಿದೆ’ ಎಂದರು.    

‘ಇನ್ಫೊಸಿಸ್‌, ವಿಪ್ರೊ, ಐಬಿಎಂ, ಎಚ್‌ಪಿ ಸೇರಿದಂತೆ ವಿವಿಧ ದೈತ್ಯ ಕಂಪನಿಗಳು ಮೈಸೂರನ್ನು ಉದ್ಯಮದ ವಿಸ್ತರಣೆಗೆ ಪರ್ಯಾಯ ಸ್ಥಳವೆಂದು ಮಾತ್ರವೇ ಗುರುತಿಸಿಲ್ಲ. ಸಂಶೋಧನೆ ಹಾಗೂ ವಿಸ್ತರಣೆಗೆ ಪ್ರಶಸ್ತ ಜಾಗವೆಂದು ಗುರುತಿಸಿವೆ. ಬಿಯಾಂಡ್‌ ಬೆಂಗಳೂರು ಅಭಿಯಾನದಡಿ ಮೈಸೂರು ಕ್ಲಸ್ಟರ್‌ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಸರ್ಕಾರ ಬದ್ಧವಾಗಿದೆ’ ಎಂದರು. 

ADVERTISEMENT

47 ಕಂಪನಿಗಳಿಂದ ಹೂಡಿಕೆ: ‘ಕಳೆದ ವರ್ಷ ಮೈಸೂರು ಕ್ಲಸ್ಟರ್‌ನ ಮೈಸೂರು, ಮಂಡ್ಯ, ರಾಮನಗರ ಹಾಗೂ ಚಾಮರಾಜನಗರದಲ್ಲಿ 47 ಹೊಸ ಕಂಪನಿಗಳು ಹೂಡಿಕೆ ಮಾಡಿದ್ದು, 4,500 ನೇರ ಉದ್ಯೋಗ ಸೃಷ್ಟಿಯಾಗಿದೆ. ಐ.ಟಿ, ಬಿ.ಟಿ ಅಲ್ಲದೇ ನವೋದ್ಯಮಗಳ ಸ್ಥಾಪನೆಗೆ ಇಲ್ಲಿ ಪೂರಕವಾದ ವಾತಾವರಣವಿದ್ದು, 450 ಹೊಸ ನವೋದ್ಯಮಗಳು ಕಾರ್ಯಾಚರಣೆ ಆರಂಭಿಸಿವೆ. ಇವುಗಳಲ್ಲಿ ಡೀಪ್‌ ಟೆಕ್‌, ರಕ್ಷಣೆ (ಡಿಫೆನ್ಸ್), ಸೇವೆ ಆಧರಿತ ಕಂಪನಿಗಳಾಗಿವೆ. ರಾಜ್ಯದ ಶೇ 15ರಷ್ಟು ನವೋದ್ಯಮಗಳು ಮೈಸೂರಿನದ್ದಾಗಿವೆ’ ಎಂದು ತಿಳಿಸಿದರು. 

‘ಬೆಂಗಳೂರು ನಂತರ ತಂತ್ರಜ್ಞಾನ ಕಂಪನಿಗಳು ಉದ್ಯಮ ಸ್ಥಾಪಿಸಲು ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ ಹಾಗೂ ಕಲಬುರಗಿಯಲ್ಲಿ ಪೂರಕ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಒಂದೂವರೆ ಗಂಟೆಯಲ್ಲಿ ತಲುಪಬಹುದು. ಇಲ್ಲಿನ ಮಂಡಕಳ್ಳಿ ವಿಮಾನದ ಬಳಿ ಜಾಗತಿಕ ತಾಂತ್ರಿಕ ಕೇಂದ್ರವನ್ನು (ಜಿಟಿಸಿ) ಅನ್ನು ರಾಜ್ಯ ಸರ್ಕಾರ ನಿರ್ಮಿಸುತ್ತಿದೆ’ ಎಂದು ಮಾಹಿತಿ ನೀಡಿದರು. 

ಇಲಾಖೆ ಕಾರ್ಯದರ್ಶಿ ಏಕರೂಪ್‌ ಕೌರ್, ಫ್ರಾನ್ಸ್‌ನ ರಾಯಭಾರಿ ಮಾರ್ಕ್ ಲ್ಯಾಮಿ, ಭಾರತೀಯ ಮಾಹಿತಿ ತಂತ್ರಜ್ಞಾನ ಪಾರ್ಕ್‌ ನಿರ್ದೇಶಕ ಸಂಜಯ್‌ ತ್ಯಾಗಿ, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಸಿಇಒ ಸಂಜೀವ್‌ ಗುಪ್ತಾ, ಮೈಸೂರು ಕ್ಲಸ್ಟರ್‌ ಮುಖ್ಯಸ್ಥ ಜಿ.ಎನ್‌.ಸುಧೀರ್‌, ‘ಎಕ್ಸೆಲ್ ಸಾಫ್ಟ್‌’ ಮುಖ್ಯಸ್ಥ ಸುಧನ್ವ ಧನಂಜಯ, ಇನ್ಫೊಸಿಸ್‌ ಉಪಾಧ್ಯಕ್ಷ ವಿನಾಯಕ ಹೆಗಡೆ, ರಂಗಸನ್ಸ್ ಏರೊಸ್ಪೇಸ್‌ನ ವ್ಯವಸ್ಥಾಫಕ ನಿರ್ದೇಶಕ ಪವನ್ ರಂಗ, ಟಿಐಇ ಮೈಸೂರು ಅಧ್ಯಕ್ಷ ಭಾಸ್ಕರ್‌ ಕಳಲೆ ಪಾಲ್ಗೊಂಡಿದ್ದರು. 

Highlights - 47 ಹೊಸ ಕಂಪನಿಗಳ ಹೂಡಿಕೆ 4,500 ನೇರ ಉದ್ಯೋಗ ಸೃಷ್ಟಿ ಮೈಸೂರಿನಲ್ಲಿ ಶೇ 15ರಷ್ಟು ನವೋದ್ಯಮಗಳು 

Quote -

ಶಿಕ್ಷಣ ಸಂಶೋಧನೆಯಲ್ಲಿ ವಿಪುಲ ಮಾನವ ಸಂಪನ್ಮೂಲ ಕೌಶಲ ಹೊಂದಿರುವ ಮೈಸೂರು ಉದ್ಯಮ ಸ್ಥಾಪನೆಗೆ ಪೂರಕವಾಗಿದ್ದು ಭವಿಷ್ಯದಲ್ಲಿ ಜಾಗತಿಕ ಉದ್ಯಮ ತಾಣಗಳಲ್ಲಿ ಒಂದಾಗಲಿದೆ

ಪ್ರಿಯಾಂಕ್‌ ಖರ್ಗೆ ಐ.ಟಿ ಬಿ.ಟಿ ಸಚಿವ

Cut-off box - ‘ಎಲೆಕ್ಟ್ರಾನಿಕ್ಸ್‌ ತಯಾರಿಕಾ ಕ್ಲಸ್ಟರ್ ಅಭಿವೃದ್ಧಿ’ ‘ಮೈಸೂರಿನಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕಾ ಕ್ಲಸ್ಟರ್ ಅಭಿವೃದ್ಧಿಗೆ ಆಸ್ಟ್ರಿಯಾವು ₹ 1582 ಕೋಟಿ ಹೂಡಿಕೆ ಮಾಡಲಿದೆ. 4750 ನೇರ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.  ‘ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ₹ 1ಸಾವಿರ ಕೋಟಿ ನೀಡಲಾಗಿದ್ದು ಮೈಸೂರು– ಮಂಡ್ಯ ಹಾಗೂ ರಾಮನಗರಕ್ಕೆ ಹೆಚ್ಚು ಆದ್ಯತೆ ಕೊಡಲಾಗಿದೆ. ಬೆಂಗಳೂರು ನಂತರ ಈ ಕ್ಲಸ್ಟರ್ ಅಭಿವೃದ್ಧಿಯು ರಾಜ್ಯದ ಆರ್ಥಿಕತೆಗೆ ಗಮನಾರ್ಹ ಬದಲಾವಣೆಯನ್ನು ತಂದುಕೊಡಲಿದೆ. ಮಂಗಳೂರು– ಉಡುಪಿ ಬೆಳಗಾವಿ– ಹುಬ್ಬಳ್ಳಿ– ಧಾರವಾಡ ಕಲಬುರಗಿ ಕ್ಲಸ್ಟರ್‌ಗಳ ಜೊತೆಯಲ್ಲಿಯೇ ಮೈಸೂರು ಕ್ಲಸ್ಟರ್ ಹೂಡಿಕೆ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.