ಮೈಸೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಟೀಕೆ ಮಾಡುವವರು ಅವರ ಕಾಲಿನ ದೂಳಿಗೂ ಸಮನಲ್ಲ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಾಯಕತ್ವ ಬದಲಾವಣೆ ಬಯಸಿರುವ ಸ್ವಪಕ್ಷೀಯ ಶಾಸಕರ ವಿರುದ್ಧವೇ ಕಿಡಿಕಾರಿದರು.
ಮೈಸೂರಿನ ಸುತ್ತೂರು ಮಠದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿ, ‘ಯಡಿಯೂರಪ್ಪ ಹುಟ್ಟು ಹೋರಾಟಗಾರ. ಅವರ ವಿರುದ್ಧ ಒಂದೆರಡು ಸಲ ಏನಾದರೂ ಟೀಕೆ ಮಾಡಬಹುದು. ಪ್ರತಿದಿನವೂ ಮಾಧ್ಯಮಗಳ ಮುಂದೆ ನಿಂತು ಅವರ ವಿರುದ್ಧ ಮಾತನಾಡುವುದೆಂದರೆ ಏನಿದರ ಅರ್ಥ? ಸ್ವಲ್ಪನಾದರೂ ಕಾಮನ್ಸೆನ್ಸ್ ಇರಬೇಕು. ಮುಖ್ಯಮಂತ್ರಿ ವಿರುದ್ಧ ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ. ಅಸಮಾಧಾನ ಇದ್ದರೆ ಪಕ್ಷದ ಸಭೆಯಲ್ಲಿ ಮಾತನಾಡಲಿ’ ಎಂದು ತಿರುಗೇಟು ನೀಡಿದರು.
‘ಕೆಲವು ಸ್ವಯಂ ಘೋಷಿತ ನಾಯಕರು ‘ನಾವೇ ಸರ್ಕಾರ ತಂದೆವು, ನಮ್ಮಿಂದಾಗಿಯೇ ಸರ್ಕಾರ ರಚನೆಯಾಗಿದೆ’ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರು 104 ಸ್ಥಾನಗಳನ್ನು ಗೆದ್ದು ತರದೇ ಇದ್ದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುತ್ತಿತ್ತಾ? ನಾವು ಇವರ ಯಾರನ್ನೂ ನಂಬಿಕೊಂಡು ಬಂದಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.