ಮೈಸೂರು: ‘ಕನ್ನಡಿಗರೇ ಬೇಕು ಎಂದು ಐಎಎಸ್ ಅಧಿಕಾರಿಗಳ ನಿಯೋಜನೆ ವಿಚಾರದಲ್ಲಿ ಹೇಳಲಾಗದು. ಕೆಲವರು ಈ ವಿಚಾರದಲ್ಲಿ ರಾಜ ಕೀಯ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶುಕ್ರವಾರ ಇಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿ ಏನು ಆದೇಶ ಮಾಡುತ್ತಾರೋ ಅದನ್ನು ಪಾಲಿಸುವುದು ನಮ್ಮ ಕರ್ತವ್ಯ. ಇದೊಂದು ಆಡಳಿತಾತ್ಮಕ ನಿರ್ಧಾರ ಎಂದರು.
ಈಗಿರುವ ಜಿಲ್ಲಾಧಿಕಾರಿಯೂ ರಾಜ್ಯದ ವಿವಿಧ ಇಲಾಖೆಗಳಲ್ಲಿ ಪ್ರಾಮಾ ಣಿಕವಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ವರ್ಗಾವಣೆಗೆ ಪ್ರತಿಕ್ರಿಯಿಸಿ, ‘ಸರ್ಕಾರ ಈಗ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇನೆ. ನನ್ನ ಗಮನಕ್ಕೆ ತಂದು ವರ್ಗಾವಣೆ ಮಾಡಲಾಗಿದೆ. ಸಿಎಟಿ ಮೊರೆ ಹೋಗಿರುವ ಶರತ್ ಅವರ ಮನವೊಲಿಸುವ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.
ಮುನಿರತ್ನಗೆ ಟಿಕೆಟ್–ಸಚಿವ
ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಮುನಿರತ್ನಗೆ ಬಿಜೆಪಿ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದೇವೆ. ಅಂತಿಮವಾಗಿ ಉನ್ನತಮಟ್ಟದ ಸಮಿತಿಯು ತೀರ್ಮಾನ ಕೈಗೊಳ್ಳಲಿದೆ. ಏನೇ ನಿರ್ಧಾರ ಕೈಗೊಂಡರೂ ಸ್ವಾಗತಿಸುತ್ತೇವೆ ಎಂದು ಸಚಿವರು ತಿಳಿಸಿದರು.
‘ಕೋರ್ ಸಮಿತಿಯಲ್ಲಿ ತೀರ್ಮಾನ ಮಾಡಿ ಪಟ್ಟಿ ಕಳಿಸಲಾಗಿದೆ. ಹಿಂದಿನ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಸೋತಿದ್ದ ಅಭ್ಯರ್ಥಿ ಹೆಸರನ್ನೂ ಕಳಿಸಿಕೊಡಲಾಗಿದೆ. ಟಿಕೆಟ್ ಚರ್ಚೆ ವಿಚಾರದಲ್ಲಿ ಹಿಂದಿನ ಪರಾಜಿತ ಅಭ್ಯರ್ಥಿಯ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಸಹಜ’ ಎಂದು ಅವರು ಹೇಳಿದರು.
ಬೃಹತ್ ಮಹಾನಗರ ಪಾಲಿಕೆಗೆ ಬೇಡಿಕೆ
ಮೈಸೂರು: ‘ಮೈಸೂರು ಬೃಹತ್ ಮಹಾನಗರ ಪಾಲಿಕೆ ಮಾಡಬೇಕೆಂಬ ಬೇಡಿಕೆ ಇದೆ. ಕೆಲವೇ ದಿನಗಳಲ್ಲಿ ಮೈಸೂರಲ್ಲಿ ಎಲ್ಲಾ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಬೇಕು’ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಪಾಲಿಕೆಗೆ 8 ಗ್ರಾ.ಪಂ ಸೇರಿಸಲು ಅರ್ಹತೆ ಇದೆ. ಜನಸಂಖ್ಯೆಯೂ ಹೆಚ್ಚಿದೆ. ಹೀಗಾಗಿ, ಆ ಪಂಚಾಯಿತಿಗಳನ್ನೇ ಮೇಲ್ದರ್ಜೆಗೇರಿಸಬೇಕೇ ಅಥವಾ ಬೃಹತ್ ಮಹಾನಗರ ಪಾಲಿಕೆಗೆ ಸೇರಿಸಬೇಕೇ ಎಂಬ ಬಗ್ಗೆ ಚರ್ಚಿಸಲಾ ಗುವುದು. ಈಗಾಗಲೇ ಬೆಂಗಳೂರಿನಲ್ಲಿ ಒಂದು ಸುತ್ತಿನ ಸಭೆ ನಡೆದಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.