ಸರಗೂರು: ‘ಎರಡನೇ ಬಾರಿಗೆ ಶಾಸಕನಾಗಲು ಅವಕಾಶ ಮಾಡಿಕೊಟ್ಟ ಜನತೆ ಋಣ ತೀರಿಸಲು ಕ್ಷೇತ್ರದ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ಶ್ರಮಿಸುವುದಾಗಿ’ ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದಲ್ಲಿ ಸರಗೂರು ವರ್ತಕ ಮಂಡಳಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ಕ್ಷೇತ್ರದ ಎಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳು ಎರಡು ಕಣ್ಣುಗಳಿದ್ದಂತೆ. ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು. ನಮ್ಮ ಕುಟುಂಬಕ್ಕೆ ಮೂರನೇ ಬಾರಿ ಶಾಸಕರಾಗಿ ಅವಕಾಶ ನೀಡಿದ ಜನತೆಗೆ ಕೃತಜ್ಞತೆ ಸಲ್ಲಿಸಲಾಗುವುದು’ ಎಂದರು.
‘ನನ್ನ ತಂದೆಯವರಾದ ದಿ.ಚಿಕ್ಕಮಾಧು ಅವರು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಚುನಾವಣೆ ವೇಳೆ ಕ್ಷೇತ್ರದ ಬಗ್ಗೆ ತಿಳಿದಿದ್ದು, ಈಗ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಸಾಕಷ್ಟು ಯೋಜನೆಗಳಿವೆ. ಅಲ್ಲದೆ ಜಿಲ್ಲೆಯವರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಗಿದ್ದಾರೆ. ಹೀಗಾಗಿ ಸರಗೂರು ತಾಲ್ಲೂಕು ಅಭಿವೃದ್ಧಿಯಾಗಲಿದೆ’ ಎಂದು ತಿಳಿಸಿದರು.
‘ಬೆಳಗಾವಿ ಮಾದರಿಯಲ್ಲಿಯೇ ಸರಗೂರು, ಕೋಟೆ ಪಟ್ಟಣ ಅಭಿವೃದ್ಧಿ ಮಾಡಲಾಗುವುದು. ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹ 8 ಕೋಟಿ ಅನುದಾನ ನೀಡಲಾಗಿದ್ದು, ಮತ್ತಷ್ಟು ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಇದಕ್ಕೆ ವರ್ತಕರ ಸಹಕಾರವೂ ಮುಖ್ಯ’ ಎಂದು ಹೇಳಿದರು.
‘ತಾಲ್ಲೂಕಿನಲ್ಲಿ ಪುರಾತನ ದೇವಾಲಯಗಳಿದ್ದು, ಧಾರ್ಮಿಕ ಕ್ಷೇತ್ರವಾಗಿದೆ. ಹಬ್ಬ, ಜಾತ್ರೆಗಳು ಹೆಚ್ಚು ನಡಯಲಿದೆ. ಐದು ವರ್ಷದಲ್ಲಿ ನಿಂತಿದ್ದ ಜಾತ್ರೆಗಳನ್ನು ಪುನರಾರಂಭ ಮಾಡಲಾಗಿದೆ. ಅದೇ ರೀತಿ ಸರಗೂರಿನ ದೊಡ್ಡ ಹಬ್ಬ ಮಾಡಲು ಎಲ್ಲರ ಸಹಕಾರ ಕೋರಲಾಗುವುದು’ ಎಂದು ಮನವಿ ಮಾಡಿದರು.
ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ವರ್ತಕರ ಸಂಘದ ಅಧ್ಯಕ್ಷ ಎಸ್.ಎನ್.ಶ್ರೀನಿವಾಸ್ ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಪಿ.ರವಿ, ಚಿಕ್ಕ ವೀರನಾಯಕ, ಕಾಂಗ್ರೆಸ್ ಟೌನ್ ಅಧ್ಯಕ್ಷ ನಾಗರಾಜು, ಮುಖಂಡರಾದ ಎಸ್.ಎಸ್.ಪ್ರಭುಸ್ವಾಮಿ, ಬ್ರಹ್ಮದೇವಯ್ಯ, ಸತೀಶ್ ಗೌಡ, ಪಿಎಸ್ಐ ನಂದೀಶ್ ಕುಮಾರ್, ಉಪಾಧ್ಯಕ್ಷ ಎಸ್.ವಿ.ವೇಣುಗೋಪಾಲ್, ಎಸ್.ವಿ.ಪ್ರಸಾದ್, ಯೋಗೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ವರುಣ್, ಡಗ್ಲಾರಾಮ್, ಎಸ್.ವಿ.ಯೋಗೀಶ್, ಎಸ್.ಎನ್.ಪ್ರತಾಪ್, ಕೆ.ಎಸ್.ಸುರೇಶ್ ಜೈನ್, ಎಸ್.ಬಿ.ನಾಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.