ADVERTISEMENT

ಕೇಂದ್ರದಿಂದ ನರೇಗಾ ಮುಗಿಸುವ ಹುನ್ನಾರ: ಯತೀಂದ್ರ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 3:56 IST
Last Updated 7 ಫೆಬ್ರುವರಿ 2026, 3:56 IST
ತಿ.ನರಸೀಪುರ‌ ತಾಲ್ಲೂಕಿನ ಆಲೆಸ್ತ್ರೀಕಟ್ಟೆಹುಂಡಿ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು
ತಿ.ನರಸೀಪುರ‌ ತಾಲ್ಲೂಕಿನ ಆಲೆಸ್ತ್ರೀಕಟ್ಟೆಹುಂಡಿ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು   

ತಿ.ನರಸೀಪುರ: ‘ಬಡ ಕೂಲಿ ಕಾರ್ಮಿಕರ ಬದುಕಿಗೆ ಆಸರೆಯಾಗಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಮಾರ್ಪಾಡು ಮಾಡಿ ಮುಗಿಸುವ ಸಂಚು ಮಾಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.

ತಾಲ್ಲೂಕಿನ ಆಲಸ್ತ್ರಿಕಟ್ಟೆ ಹುಂಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಾದ್ಯಂತ ಮನರೇಗಾ ಯೋಜನೆಯಿಂದ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿ ಅವರ ದುಡಿಮೆಯ ಹಣ ನೇರವಾಗಿ ಸಂದಾಯವಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರದ ವಿ.ಬಿ ರಾಮ್ ಜಿ ಕಾಯ್ದೆ ಅನುಷ್ಠಾನದಿಂದ ಯೋಜನೆಯನ್ನು ಹಾಳು ಮಾಡುತ್ತಿದೆ. ಇದಕ್ಕೆ ಬಳಕೆಯಾಗುವ ಲಕ್ಷಾಂತರ ಕೋಟಿ ಹಣವನ್ನು‌ ಶ್ರೀಮಂತರಿಗೆ ರವಾನಿಸುವ ಪ್ರಯತ್ನ‌ ಮಾಡುತ್ತಿದೆ’ ಎಂದು ದೂರಿದರು.

ADVERTISEMENT

‘ಉತ್ತರ ಭಾರತ ಹಾಗೂ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಜನರು ನರೇಗಾ ಯೋಜನೆ ನಂಬಿ ಬದುಕುತ್ತಿದ್ದಾರೆ. ಮನರೇಗಾ ಯೋಜನೆಯಡಿ 125 ದಿನಗಳ ಉದ್ಯೋಗ ನೀಡುತ್ತೇವೆ ಎನ್ನುವ ಸರ್ಕಾರ 50 ದಿನ ಮಾತ್ರ ನೀಡುತ್ತಿದೆ. ಕನಿಷ್ಠ ಶೇ 60 ರಷ್ಟಾದರೂ ₹2 ಲಕ್ಷ ಕೋಟಿ ಮೀಸಲಿಡಬೇಕು, ಆದರೆ ಕೇಂದ್ರ ಸರ್ಕಾರ ₹95 ಸಾವಿರ ಕೋಟಿ ಮಾತ್ರ ಇಟ್ಟಿದೆ. ಮನರೇಗಾ ಯೋಜನೆಯನ್ನು‌ ಉಳಿಸಲು ಗ್ರಾಮ‌ ಪಂಚಾಯಿತಿಗಳಲ್ಲಿ ಜಾಗೃತಿ ಮೂಡಬೇಕಿದೆ. ನಾವು ಕೂಡ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿ ಪ್ರತಿಭಟನೆ ತೋರುತ್ತಿದ್ದೇವೆ’ ಎಂದು ತಿಳಿಸಿದರು.

‘ಕ್ಷೇತ್ರದ ಗ್ರಾಮಗಳಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಾಗಿದ್ದು, ರಸ್ತೆ, ಚರಂಡಿ, ಅಂಗನವಾಡಿ ಕೇಂದ್ರಗಳಾಗಿವೆ. ಅನುದಾನ‌ ಪಂಚಾಯಿತಿಗೆ ಆದ್ಯತೆವಾರು ಬಿಡುಗಡೆ ಆಗುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸುರೇಶ್ ಅಚಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಪಯ್ಯನಹುಂಡಿ ಮಹದೇವಣ್ಣ, ಮುಖಂಡರಾದ ಕೆ.ಮಹದೇವ್, ರಮೇಶ್, ಮನ್ನೆ ಹುಂಡಿ ಮಹೇಶ್, ಎನ್.ಸೋಮು, ತುಂಬಲ ಪ್ರಕಾಶ್, ಬನ್ನಹಳ್ಳಿಹುಂಡಿ ಪುಟ್ಟ ಸುಬ್ಬಯ್ಯ, ಮುದ್ದು ಬೀರನ ಹುಂಡಿ ಗುರುಸ್ವಾಮಿ, ಕರಿಯಪ್ಪ, ಎಂ.ಕೆ. ಸಹದೇವ, ಆರ್. ಐ ಮಹೇಂದ್ರ, ಬಸವರಾಜು, ಗ್ರಾಮಸ್ಥರು, ಅಧಿಕಾರಿಗಳು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.