
ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸಿ.ಎ. ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿದ್ದ ಕಟ್ಟಡವನ್ನು ಪ್ರಾಧಿಕಾರದ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.
ವರುಣ ಹೋಬಳಿಯ ವಾಜಮಂಗಲ ಗ್ರಾಮದಲ್ಲಿ ಒಟ್ಟು 1 ಎಕರೆ 34 ಗುಂಟೆ ವಿಸ್ತೀರ್ಣದಲ್ಲಿ ವಸತಿ ಬಡಾವಣೆ ವಿನ್ಯಾಸ ನಕ್ಷೆಗೆ 2019ರಲ್ಲಿ ಅಂದಿನ ಮುಡಾ ಅಂತಿಮ ಅನುಮೋದನೆ ನೀಡಿತ್ತು. ಇದರಲ್ಲಿ ನಾಗರಿಕ ಸೌಕರ್ಯ ನಿವೇಶನಕ್ಕಾಗಿ 378.18 ಚದರ ಮೀಟರ್ ಜಾಗವನ್ನು ಕಾಯ್ದಿರಿಸಲಾಗಿತ್ತು.
ಈ ನಿವೇಶನದಲ್ಲಿ ಅನಧಿಕೃತವಾಗಿ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದು, ಅದನ್ನು ತೆರವುಗೊಳಿಸುವಂತೆ ಎಂಡಿಎ ಕಾರ್ಯದರ್ಶಿ ಸೂಚಿಸಿದ್ದರು. ಅದರಂತೆ ತೆರವು ಕಾರ್ಯಾಚರಣೆ ನಡೆಯಿತು. ಆಲನಹಳ್ಳಿ ಹಾಗೂ ಉದಯಗಿರಿ ಪೊಲೀಸರು ಭದ್ರತೆ ಒದಗಿಸಿದ್ದರು.
ಎಂಡಿಎ ಇಇ ನಾಗೇಶ್, ಎಇಇಗಳಾದ ಮಂಜುನಾಥ್, ಮೋಹನ್ ಕುಮಾರ್, ಸಂಪತ್ ಕುಮಾರ್, ನಗರ ಯೋಜನ ಶಾಖೆಯ ಸಹಾಯಕ ನಿರ್ದೇಶಕ ಶ್ರೀಧರ್, ಕಿರಿಯ ಎಂಜಿನಿಯರ್ ಜಿ. ರಾಜಶೇಖರ್, ಭೂಮಾಪಕ ಹನುಮೇಗೌಡ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.