ADVERTISEMENT

ಎನ್‌ಒಸಿ ನೀಡದ ಮುಡಾ; ದೂರು

ಜೆ.ಸಿ.ನಗರ ಬಡಾವಣೆ ನಿವಾಸಿಗಳ ಅಳಲು

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 13:58 IST
Last Updated 31 ಜನವರಿ 2022, 13:58 IST

ಮೈಸೂರು: ‘ಜೆ.ಸಿ.ನಗರ ಬಡಾವಣೆಯಲ್ಲಿ ರಾಜಮನೆತನದವರು ತಮ್ಮ ಕುಟುಂಬಕ್ಕೆ ನೀಡಿದ ನಿವೇಶನದಲ್ಲಿ ಹಲವು ವರ್ಷಗಳ ಹಿಂದೆಯೇ ಮನೆ ಕಟ್ಟಿಕೊಂಡು ವಾಸವಿದ್ದರೂ; ಖಾತೆ ಮಾಡಿಸಿಕೊಳ್ಳಲು ಅಗತ್ಯವಿರುವ ಎನ್‌ಒಸಿ ನೀಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸತಾಯಿಸುತ್ತಿದ್ದಾರೆ’ ಎಂದು ಮೊಹಮ್ಮದ್ ಅಮೀರ್ ಸೋಮವಾರ ಇಲ್ಲಿ ಆರೋಪಿಸಿದರು.

‘ಅರಮನೆಯ ಅಶ್ವಾರೋಹಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ತಂದೆ ಮೊಹಮ್ಮದ್ ದಸ್ತಗೀರ್‌ಗೆ ನಿವೇಶನವೊಂದನ್ನು ಅರಮನೆ ನೀಡಿತ್ತು. ಅಲ್ಲಿ ಮನೆ ಕಟ್ಟಿಕೊಂಡು ನಮ್ಮ ಕುಟುಂಬ ವಾಸವಾಗಿದೆ. ಈಗ ಖಾತೆ ಮಾಡಿಸಿಕೊಳ್ಳಲಿಕ್ಕಾಗಿ ಪಾಲಿಕೆಗೆ ಹೋದರೆ; ಮುಡಾದಿಂದ ಎನ್‌ಒಸಿ ತನ್ನಿ ಎಂದಿದ್ದಾರೆ. ಮುಡಾಗೆ ಅರ್ಜಿ ಸಲ್ಲಿಸಿದರೂ ಎನ್‌ಒಸಿ ಕೊಟ್ಟಿಲ್ಲ. ಕೆಲವು ಮಧ್ಯವರ್ತಿಗಳು ಲಂಚ ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಹೇಳುತ್ತಿದ್ದಾರೆ’ ಎಂದು ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸ್ಥಳೀಯ ನಿವಾಸಿ ಶ್ರೀಪಾದ್ ಮಾತನಾಡಿ ‘ರಾಜರು 375 ಕುಟುಂಬಗಳಿಗೆ ನಿವೇಶನ ನೀಡಿದ್ದರು. ಇದರಲ್ಲಿ 280ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರವಿದ್ದರೂ; ಖಾತೆಯಾಗಿಲ್ಲ. ಈ ಬಗ್ಗೆ ಮುಡಾದವರನ್ನು ಕೇಳಿದರೆ ಕೆಎಆರ್‌ಪಿ ಮೌಂಟೆಂಡ್ ಎಂಪ್ಲಾಯಿಸ್ ಕೋ ಆಪರೇಟಿವ್ ಸೊಸೈಟಿ ವ್ಯಾಪ್ತಿಗೆ ನಿವೇಶನ ಒಳಪಟ್ಟಿದೆ ಅನ್ನುತ್ತಾರೆ. ಆದರೆ, ಈ ಸೊಸೈಟಿ ಸೂಪರ್ ಸೀಡ್ ಆಗಿ ಎಷ್ಟೋ ವರ್ಷ ಕಳೆದಿದೆ. ಪ್ರಾಧಿಕಾರದ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಖಾತೆ ಮಾಡಿಸಿಕೊಳ್ಳಲು ಅಗತ್ಯವಾದ ದಾಖಲಾತಿ ಪತ್ರ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಹೋರಾಟಗಾರ ಬೋ.ಗಾ.ನಂದೀಶ್, ಶಾರದಾ, ಸಯ್ಯಾದ್ ನಾಸೀಮ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.