ಸರಗೂರು: ತಾಲ್ಲೂಕಿನ ಚಾಮೇಗೌಡನಹುಂಡಿಯಲ್ಲಿ ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಕೊಂದಿದ್ದ ಆರೋಪಿ ಮಣಿಕಂಠಸ್ವಾಮಿಯನ್ನು (35) ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.
ಪತ್ನಿ ಗಂಗಾ ಮೇಲೆ ಇದ್ದ ಅನುಮಾನವೇ ಕೊಲೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪ್ರತಿ ಬಾರಿ ಜಗಳವಾದಾಗಲೂ ತಾಯಿ ಕೆಂಪಾಜಮ್ಮ ಪತ್ನಿಯ ಬೆಂಬಲಕ್ಕೆ ನಿಲ್ಲುತ್ತಿದ್ದರು. ರಾಜಿ ಪಂಚಾಯ್ತಿ ನಡೆದಾಗಲೂ ತಾಯಿಯು ಪತ್ನಿ ಪರ ವಹಿಸುತ್ತಿದ್ದುದ್ದರಿಂದ ತಾಯಿಯ ಕುರಿತೂ ಈತನಿಗೆ ಅಸಹನೆ ಇತ್ತು.
ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದ ಪತ್ನಿಯನ್ನು ಗುರುವಾರ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಿಸಬೇಕಿತ್ತು. ವಿಪರೀತ ಮದ್ಯ ಸೇವನೆ ಮಾಡಿದ ಮಣಿಕಂಠಸ್ವಾಮಿ ಬುಧವಾರ ರಾತ್ರಿ ಒಂದೇ ಕೋಣೆಯಲ್ಲಿ ಎಲ್ಲರೂ ಒಟ್ಟಿಗೆ ಮಲಗಿದ್ದಾಗ ತಾನು ಊರುಗೋಲಾಗಿ ಬಳಸುವ ಕಬ್ಬಿಣದ ಕೋಲಿನಿಂದ ಎಲ್ಲರ ತಲೆಯ ಮೇಲೂ ಹೊಡೆದಿದ್ದಾನೆ. ಇದರಿಂದ ಸ್ಥಳದಲ್ಲೇ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳೂ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.