ಮೈಸೂರು: ಇಲ್ಲಿನ ಜನತಾನಗರದ ನಿವಾಸಿ ಉಮೇಶ್ ಅಲಿಯಾಸ್ ಬೋಸಿ ಎಂಬ ರೌಡಿಶೀಟರ್ನನ್ನು ಕೊಲೆ ಮಾಡಿ ಜನತಾನಗರದ ಸ್ಮಶಾನದ ಬಳಿ ಹೂತಿರುವ ಸಂಗತಿ ಗೊತ್ತಾಗಿದೆ. ಕೊಲೆ ಆರೋಪದ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತದೇಹವನ್ನು ಹೊರತೆಗೆಯುವ ಕಾರ್ಯಕ್ಕಾಗಿ ಪೊಲೀಸರು ಉಪವಿಭಾಗಾಧಿಕಾರಿ ಕಮಲಾಬಾಯಿ ಅವರಿಗೆ ಮನವಿ ಸಲ್ಲಿಸಿದ್ದು, ಸಂಜೆ ವೇಳೆಗೆ ಮೃತದೇಹ ಹೊರತೆಗೆಯುವ ಸಾಧ್ಯತೆ ಇದೆ.
ಆ. 25ರಿಂದ ಉಮೇಶ್ ಅವರು ನಾಪತ್ತೆಯಾಗಿದ್ದು, ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೀಟ್ ಕಾನ್ಸ್ಟೆಬಲ್ ಅರ್ಜುನ್ ಹಾಗೂ ಗುಪ್ತಚರ ದಳದ ಹೆಡ್ಕಾನ್ಸ್ಟೆಬಲ್ ಎಲ್.ಎಂ.ಪ್ರಕಾಶ್ ಅವರು ಸಂಗ್ರಹಿಸಿದ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಕೊಲೆ ಮಾಡಿದ ನಂತರ ಜನತಾನಗರದ ಸ್ಮಶಾನದ ಸಮೀಪ ಮೃತದೇಹ ಹೂತಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆ. 23ರಂದು ಚಿನ್ನದಂಗಡಿ ದರೋಡೆ ಮಾಡಿ, ಗ್ರಾಹಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮರುದಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಗುಡ್ಡದಲ್ಲಿ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಈಕೆಯ ಸ್ನೇಹಿತನ ಮೇಲೆ ಗಂಭೀರ ಹಲ್ಲೆ ನಡೆಸಲಾಗಿತ್ತು. ಕೆಲವು ದಿನಗಳ ಹಿಂದೆ ಉದಯಗಿರಿ ವ್ಯಾಪ್ತಿಯಲ್ಲಿ 2 ಕೊಲೆಗಳು ಒಂದು ದಿನದ ನಂತರ ಮತ್ತೊಂದರಂತೆ ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.