ಮೈಸೂರು: ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೊ ಪ್ರಕರಣದ ಸಂತ್ರಸ್ತೆಯರಿಗೆ ಆಶ್ರಯ ನೀಡಿ,
ಪ್ರಕರಣವನ್ನು ಬಯಲಿಗೆ ತಂದ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶುರಾಮ್ ಎಂ.ಎಲ್ ಅವರಿಗೆ ನಿರಂತರ ಜೀವ ಬೆದರಿಕೆ ಬರುತ್ತಿದ್ದು, ರಕ್ಷಣೆ ನೀಡುವಂತೆ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರಿಗೆ ಶನಿವಾರ ಮನವಿ ಮಾಡಿದ್ದಾರೆ.
‘ಶರಣರ ಬಂಧನದ ಬಳಿಕ ಅವರ ಅನುಯಾಯಿಗಳು ಮತ್ತು ಮಠದ ಪರವಾಗಿರುವ ಹಿತಾಸಕ್ತಿಗಳು ಪ್ರಾಣ ಬೆದರಿಕೆ ಒಡ್ಡುತ್ತಿದ್ದು, ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಈ ಕಾರಣದಿಂದ ನಮಗೂ, ಕುಟುಂಬಕ್ಕೂ ರಕ್ಷಣೆ ಒದಗಿಸಬೇಕು. ಒಡನಾಡಿ ಮಡಿಲು ಸಂಸ್ಥೆಯು ಹೆಣ್ಣು ಮಕ್ಕಳ ಪುನರ್ವಸತಿ ಸಂಸ್ಥೆಯಾಗಿದ್ದು, ಸಂಸ್ಥೆಗೆ ಗನ್ಮ್ಯಾನ್ ಸಹಿತ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಕೋರಿದ್ದಾರೆ.
‘ಭಾನುವಾರ ಠಾಣೆಗೆ ಬರುವಂತೆ ಇಬ್ಬರಿಗೂ ತಿಳಿಸಲಾಗಿದೆ’ ಎಂದು ವಿಜಯನಗರ ಠಾಣೆಯ ಠಾಣಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.