ADVERTISEMENT

ಮೈಸೂರು: ರೈಲು ನಿಲ್ದಾಣ ಮೇಲ್ದರ್ಜೆ ಕಾರ್ಯ ಶುರು, ರೈಲು ಸಂಚಾರ ವ್ಯತ್ಯಯ

ಇಂದಿನಿಂದ ಫ್ಲಾಟ್‌ಫಾರ್ಮ್‌ ನಂ. 2 ಸ್ಥಗಿತ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 5:28 IST
Last Updated 10 ಫೆಬ್ರುವರಿ 2019, 5:28 IST
ಮೈಸೂರು ರೈಲು ನಿಲ್ದಾಣ ಪ್ಲಾಟ್‌ಫಾರ್ಮ್‌ ನಂ. 2
ಮೈಸೂರು ರೈಲು ನಿಲ್ದಾಣ ಪ್ಲಾಟ್‌ಫಾರ್ಮ್‌ ನಂ. 2   

ಮೈಸೂರು: ಪಾರಂಪರಿಕ ಮಹತ್ವವಿರುವ ಮೈಸೂರು ರೈಲು ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ಶುರುವಾಗಿದ್ದು, ಇದರ ಅಂಗವಾಗಿ ಫೆ.10ರಿಂದ ಫ್ಲಾಟ್‌ಫಾರ್ಮ್‌ ನಂ.2 ಸ್ಥಗಿತಗೊಳ್ಳಲಿದೆ.

ಅಂತೆಯೇ, ಈ ಪ್ಲಾಟ್‌ಫಾರ್ಮ್‌ನಿಂದ ಸಂಚರಿಸುತ್ತಿದ್ದ ಐದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ರೈಲುಗಳು ಸನಿಹದ ರೈಲು ನಿಲ್ದಾಣಗಳಿಂದ ಪಯಣ ಬೆಳೆಸಲಿವೆ.

ಪ್ಲಾಟ್‌ಫಾರ್ಮ್ ನಂ.2ರಲ್ಲಿ ಆರಂಭದಿಂದಲೂ ಶುಚಿತ್ವಕ್ಕೆ ಬಳಸುವ ನೀರು ಸರಿಯಾಗಿ ಹರಿಯದೇ ತೊಂದರೆಯಾಗುತ್ತಿತ್ತು. ಈ ಕುರಿತು ಕ್ರಮ ತೆಗೆದುಕೊಂಡಿರುವ ನೈರುತ್ಯ ರೈಲ್ವೆ, ನೀರು ಸರಾಗವಾಗಿ ಹರಿಯಲು ಕಿರು ಕಾಲುವೆಯನ್ನು ನಿರ್ಮಿಸುತ್ತಿದೆ. ಪ್ಲಾಟ್‌ಫಾರ್ಮ್‌ ನಂ.2ರಿಂದ ಶುರುವಾಗುವ ಈ ಕಾಲುವೆಯು ಮೈಸೂರು ಯಾರ್ಡಿನಿಂದ, ರೈಲ್ವೆ ಮೈಸೂರು ವಿಭಾಗದ 2ನೇ ರಸ್ತೆಗೆ ಸೇರುತ್ತದೆ. ಹಾಗಾಗಿ, ಪ್ಲಾಟ್‌ಫಾರ್ಮ್‌ ಹಾಗೂ ರೈಲುಗಳನ್ನು ತೊಳೆಯಲು ಬಳಸುವ ನೀರು ಈ ಕಾಲುವೆಯ ಮೂಲಕ ಸರಾಗವಾಗಿ ಹರಿಯಲಿದೆ. ಇದರಿಂದ ರೈಲು ನಿಲ್ದಾಣದ ಒಳಾಂಗಣ ಶುಚಿಯಾಗಿರುತ್ತದೆ ಎಂದು ನೈರುತ್ಯ ರೈಲ್ವೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಕೊಂಚ ವ್ಯತ್ಯಯ: ಈಗ ನಡೆಯ ಲಿರುವ ಕಾಮಗಾರಿಗಳಿಂದಾಗಿ ಫೆ.10ರಿಂದ ಮಾರ್ಚ್‌ 10ರವರೆಗೆ ಒಟ್ಟು 29 ದಿನ 5 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಶಿವಮೊಗ್ಗ – ಮೈಸೂರು ಪ್ಯಾಸೆಂಜರ್ ರೈಲು (56269) ಬೆಳಗೊಳ ನಿಲ್ದಾಣದಲ್ಲಿ ಅಂತ್ಯಗೊಳ್ಳಲಿದೆ. ಮೈಸೂರು – ಅರಸೀಕೆರೆ ಪ್ಯಾಸೆಂಜರ್ ರೈಲು (56268) ಬೆಳಗೊಳ ನಿಲ್ದಾಣ ದಿಂದ ಹೊರಡಲಿದೆ. ಚಾಮರಾಜ ನಗರ – ಮೈಸೂರು ಪ್ಯಾಸೆಂಜರ್ ರೈಲು (56207) ಅಶೋಕಪುರಂ ನಿಲ್ದಾಣದಲ್ಲಿ 45 ನಿಮಿಷ ಕಾಲ ಅರಸೀಕೆರೆ – ಮೈಸೂರು ಪ್ಯಾಸೆಂಜರ್‌ ರೈಲು (56263) ಬೆಳಗೊಳ ನಿಲ್ದಾಣದಲ್ಲಿ ನಿಲ್ಲಲಿದೆ. ಮೈಸೂರು - ಬೆಂಗಳೂರು ಪ್ಯಾಸೆಂಜರ್ ರೈಲು (56263) ಮೈಸೂರು ನಿಲ್ದಾಣಕ್ಕೆ ಮುಂಚೆಯೇ ನಿಲ್ಲಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಿಲ್ದಾಣ ಮೇಲ್ದರ್ಜೆ ಪ್ರಗತಿಯಲ್ಲಿ
ಬಹುನಿರೀಕ್ಷಿತ ರೈಲು ನಿಲ್ದಾಣ ಮೇಲ್ದರ್ಜೆ ಕಾರ್ಯಕ್ರಮ ಈಗಾಗಲೇ ಶುರುವಾಗಿದೆ. ಕೇಂದ್ರ ಸರ್ಕಾರವು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಸಲುವಾಗಿ ₹ 16.5 ಕೋಟಿ ಅನುದಾನ ನೀಡಿದ್ದು, 10ಕ್ಕೂ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿವೆ.

ನಿಲ್ದಾಣದಲ್ಲಿ ಈಗ ಮೇಲೆ ಸಾಗುವ ಎಸ್ಕಲೇಟರ್‌ ಇದೆ. ಇದೀಗ ಕೆಳಕ್ಕೆ ಸಾಗುವ ಎಸ್ಕಲೇಟರ್‌ ಸಹ ಸೇರ್ಪಡೆಯಾಗುತ್ತಿದೆ. ಮುಖ್ಯವಾಗಿ ಪರಿಪೂರ್ಣ ಹೊಸ ವಾಹನ ನಿಲುಗಡೆ ಕೇಂದ್ರ ಬರಲಿದೆ.

ಜತೆಗೆ, ಪ್ರವೇಶದ್ವಾರ ಹೊಸ ರೂಪ ಪಡೆಯಲಿವೆ. ಸುಮಾರು 1 ಕಿಲೋಮೀಟರ್‌ ದೂರಕ್ಕೆ ಕಾಣುವಂತೆ ರೈಲ್ವೆ ಧ್ವಜ ತಲೆ ಎತ್ತಲಿವೆ ಎಂದು ಸಂಸದ ಪ್ರತಾಪ ಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಲ್ದಾಣದ ಒಳಾಂಗಣದಲ್ಲಿ ಹಂತ ಹಂತವಾಗಿ ಒಂದೊಂದೇ ಫ್ಲಾಟ್‌ ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಮೈಸೂರಿನಲ್ಲಿ 40ಕ್ಕೂ ಹೆಚ್ಚು ರೈಲುಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಏಕಕಾಲಕ್ಕೆ ಉನ್ನತೀಕರಣ ಅಸಾಧ್ಯ. ಹಾಗಾಗಿ, ಒಂದೊಂದೇ ಫ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಒಂದೂವರೆ ವರ್ಷದಲ್ಲಿ ಮೇಲ್ದರ್ಜೆ ಪೂರ್ಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.