ಮೈಸೂರು: ಇಲ್ಲಿನ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ‘ಮೈಸೂರು ಚಲೋ’ ಚಳವಳಿಯ 77ನೇ ಸಂಭ್ರಮಾಚರಣೆ ಗುರುವಾರ ನಡೆಯಿತು.
ಮೈಸೂರು ಜಿಲ್ಲೆ ಹಾಗೂ ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ರೇವಣ್ಣ ಅವರು ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿ, ‘ಮೈಸೂರು ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನವಾಗದ್ದರಿಂದ ಸಾವಿರಾರು ಹೋರಾಟಗಾರರು ಚಳವಳಿ ನಡೆಸಿದ ಪರಿಣಾಮ 1947ರ ಅ.24ರಂದು ವಿಲೀನವಾಯಿತು. ರಾಜಪ್ರಭುತ್ವ ಕಳೆದು ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿತು’ ಎಂದರು.
‘1947ರ ಸೆ.1ರಿಂದ ಚಳವಳಿ ಆರಂಭವಾಯಿತು. ಸಂಸ್ಥಾನವು ಸ್ವತಂತ್ರವಾಗಿ ಉಳಿಯಲಿದೆಯೆಂದು ಮಹಾರಾಜರ ಆಪ್ತರು ಹೇಳಿದ್ದರು. ಅದನ್ನು ವಿರೋಧಿಸಿ ಮೈಸೂರು ಚಲೋ ಚಳವಳಿ ನಡೆದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ರಾಮಸ್ವಾಮಿ ಧೈರ್ಯವಾಗಿ ವೃತ್ತದ ದೀಪದ ಕಂಬವೇರಿ ತ್ರಿವರ್ಣ ಧ್ವಜ ಹಾರಿಸಿದ್ದರು. ಆಗಿನ ಜಿಲ್ಲಾಧಿಕಾರಿ ನಾಗರಾಜರಾವ್ ಅವರು ಗುಂಡು ಹಾರಿಸುವುದಾಗಿ ಎಚ್ಚರಿಸಿದ್ದರು. ಸಂಬಳಕ್ಕೆ ಗುಲಾಮರಾಗಬೇಡಿ, ನಮ್ಮೊಂದಿಗೆ ಸ್ವಾತಂತ್ರ್ಯಕ್ಕೆ ಹೋರಾಡಿ ಎಂದು ಗುಂಡಿಗೆ ಎದೆಯೊಡ್ಡಿದ್ದರು. 3 ಗುಂಡುಗಳು ಹೊಕ್ಕಿದ್ದವು. ಹೋರಾಟದ ಫಲವಾಗಿ ಅ.24ರಂದು ಮೈಸೂರು ಸಂಸ್ಥಾನವು ಭಾರತ ಒಕ್ಕೂಟ ಸೇರಿತು’ ಎಂದು ಹೇಳಿದರು.
ನಂತರ ರಾಮಸ್ವಾಮಿ ವೃತ್ತದಲ್ಲಿನ ರಾಮಸ್ವಾಮಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಮುಖಂಡರಾದ ಪ್ರಮೀಳಾ ಭರತ್, ಜೋಗಿ ಮಂಜು, ಸಂಘದ ಕಾರ್ಯದರ್ಶಿ ರವಿ ಡಿ, ಕಾರ್ಯಾಧ್ಯಕ್ಷ ಯೋಗಾನಂದ, ವೇದಾಂಬ, ನಾಗರತ್ನ, ಗಿರಿಜಾ, ಅಶ್ವಥ್ ನಾರಾಯಣ್, ಭಾಗ್ಯಲಕ್ಷ್ಮಿ, ಕಮಲಮ್ಮ, ವಿಘ್ನೇಶ್ವರ ಭಟ್, ನಾಗೇಶ್ ಯಾದವ್, ಪಾಪಣ್ಣ, ಚರಣ್, ಸುಕನ್ಯಾ, ಗೀತಾ, ಮಧು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.