ಮೈಸೂರು: ಮೈಸೂರು ಅಭಿವೃದ್ಧಿಗೆ ಪ್ರತಾಪಸಿಂಹ ಕೊಡುಗೆ ಕುರಿತು ಸಂಸದರ ಕಚೇರಿಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಹಂದಿ,ಕತ್ತೆಗಳ ಮೆರವಣಿಗೆ ಮೂಲಕ ತೆರಳಿ ಮಂಗಳವಾರ ವಿಭಿನ್ನವಾಗಿ ಪ್ರತಿಭಟಿಸಲು ಮುಂದಾದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, 'ಮೈಸೂರು ಬೆಂಗಳೂರು ದಶಪಥ ಹೆದ್ದಾರಿ, ಜಿಲ್ಲಾಸ್ಪತ್ರೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೊಳಿಸಲಾಗಿದೆ. ಆದರೆ, ಸಂಸದರು ತಾವೇ ಕೆಲಸ ಮಾಡಿದ್ದೆಂದು ಮಾಧ್ಯಮಗಳ ಮುಂದೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೆವು. ಆದರೆ, ಕತ್ತೆ, ಹಂದಿಗಳ ಜೊತೆಗೆ ಚರ್ಚೆ ನಡೆಸುವುದಿಲ್ಲ ಎಂದು ಪ್ರತಾಪಸಿಂಹ ತಿಳಿಸಿದ್ದರು. ಈ ಕಾರಣದಿಂದ ಕತ್ತೆ, ಹಂದಿ ಮೂಲಕ ಮೆರವಣಿಗೆಯಲ್ಲಿ ಸಾಗಿ ಅವರ ಕಚೇರಿಯಲ್ಲಿ ಸಂವಾದ ನಡೆಸಲಿದ್ದೇವೆ' ಎಂದು ಅವರು ತಿಳಿಸಿದರು.
ಮೆರವಣಿಗೆ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಿ.ದಾಸಪ್ಪ ವೃತ್ತಕ್ಕೆ ಬರುತ್ತಿದ್ದಂತೆಯೇ, ಪೊಲೀಸರು ತಡೆದರು. ಈ ವೇಳೆ ಪೊಲೀಸರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಅಂತಿಮವಾಗಿ ಲಕ್ಷ್ಮಣ್ ಅವರನ್ನು ಕರೆದೊಯ್ಯುವುದಾಗಿ ತಿಳಿಸಿ ಪೊಲೀಸರು ವಶಕ್ಕೆ ಪಡೆದರು.
ಸಮುದಾಯದ ನಿಂದನೆ: ಹಂದಿ ವಿಜಯನಗರ ಸಾಮ್ರಾಜ್ಯದ ಲಾಂಛನ. ಕತ್ತೆ ಮಡಿವಾಳ ಸಮುದಾಯದವರ ಜೀವನಾಡಿ. ಈ ಪ್ರಾಣಿಗಳ ವಿರುದ್ಧ ಕೇವಲವಾಗಿ ಮಾತನಾಡಿ, ಸಮುದಾಯಗಳಿಗೆ ಸಂಸದರು ಅವಮಾನ ಮಾಡಿದ್ದಾರೆ. ಸಾಂಕೇತಿಕವಾಗಿ ಕತ್ತೆ, ಹಂದಿಗಳ ಮೂಲಕ ಸಂಸದರ ಕಚೇರಿಗೆ ಮೆರವಣಿಗೆ ನಡೆಸಿದ್ದೇವೆ.ರೌಡಿ ಶೀಟರ್ ಗಳ ಮೂಲಕ ಪ್ರತಾಪ ಸಿಂಹ ಅವರು ಬೆಂಬಲಿಗರ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಈ ವೇಳೆ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.