ಮೈಸೂರು: ಬೆಂಗಳೂರಿನ ಯುವ ಗಾಲ್ಫರ್ ಶೌರ್ಯ ಬಿನು ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ ‘ಮೈಸೂರು ಓಪನ್–2024’ ಗಾಲ್ಫ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಹಾಗೂ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್ (ಜೆಡಬ್ಲ್ಯುಜಿಸಿ) ಸಹಯೋಗದಲ್ಲಿ ನಡೆದ ಟೂರ್ನಿಯ ಕಡೆಯ ಎರಡು ದಿನಗಳಲ್ಲಿ ಉತ್ತಮ ಪ್ರದರ್ಶನದೊಂದಿಗೆ (ಸ್ಕೋರ್: 23 ಅಂಡರ್ 257 ) ಶೌರ್ಯ ₹15 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಂಡರು. ಅವರು ಈ ವರ್ಷ ಜಯಿಸಿದ ಎರಡನೇ ಪ್ರಶಸ್ತಿ ಇದಾಗಿದೆ. ಫೆಬ್ರುವರಿಯಲ್ಲಿ ಊಟಿಯಲ್ಲಿ ನಡೆದ ಪಿಜಿಟಿಎ ಟೂರ್ನಿಯಲ್ಲೂ ಅವರು ಪ್ರಶಸ್ತಿ ಪಡೆದಿದ್ದರು.
ಪಟ್ನಾದ ಗಾಲ್ಫರ್ ಅಮನ್ ರಾಜ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಆಗಿ ₹10 ಲಕ್ಷ ಬಹುಮಾನ ಗಳಿಸಿದರು. ಮೊದಲ ಎರಡು ದಿನ ಮುನ್ನಡೆಯಲ್ಲಿದ್ದ 29 ವರ್ಷ ವಯಸ್ಸಿನ ಈ ಆಟಗಾರ ಕಡೆಯ ದಿನ ಮುನ್ನಡೆ ಕೈಚೆಲ್ಲಿ ನಿರಾಸೆ ಅನುಭವಿಸಿದರು.
ಮೈಸೂರಿನ ಹವ್ಯಾಸಿ ಗಾಲ್ಫರ್ ವೀರ್ ಗಣಪತಿ ಚೇತೋಹಾರಿ ಪ್ರದರ್ಶನದ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ಬಂದಿದ್ದ 17 ವರ್ಷ ವಯಸ್ಸಿನ ಈ ಆಟಗಾರ ಟೂರ್ನಿಯ ‘ಉತ್ತಮ ಉತ್ತಮ ಹವ್ಯಾಸಿ ಗಾಲ್ಫರ್’ ಗೌರವಕ್ಕೂ ಪಾತ್ರರಾದರು.
ಮೈಸೂರಿನ ಆಟಗಾರರಾದ ಆರ್ಯನ್ ರೂಪ ಆನಂದ್ 17ನೇ, ಐ.ಎಲ್.ಆಲಾಪ್ 30ನೇ ಹಾಗೂ ಎಂ.ಎಸ್. ಯಶಸ್ ಚಂದ್ರ 36ನೇ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.