ADVERTISEMENT

ಮೈಸೂರು ತಾಲ್ಲೂಕಿನಲ್ಲಿ ಇಬ್ಬರ ಕೊಲೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2020, 5:39 IST
Last Updated 25 ಮೇ 2020, 5:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ತಾಲ್ಲೂಕಿನ ಜಯಪುರ ಹೋಬಳಿಯ ಕೋಟೆಹುಂಡಿ ಸಮೀಪ‌ ಭಾನುವಾರ ರಾತ್ರಿ ಇಬ್ಬರ ಕೊಲೆಯಾಗಿದ್ದು, ಆರೋಪಿಯನ್ನು ಪೊಲೀಸರು ಸೋಮವಾರ ನಸುಕಿನಲ್ಲಿ ಬಂಧಿಸಿದ್ದಾರೆ‌.

ಯಡಹಳ್ಳಿ ಗ್ರಾಮದ ಟಿ.ಮಂಜುನಾಥ್ (33) ಹಾಗೂ ಆರ್.ಮಂಜುನಾಥ್ (35) ಕೊಲೆಯಾದವರು. ಇವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪದ ಮೇರೆಗೆ ಕೋಟೆ ಹುಂಡಿಯ ನಿವಾಸಿ ಯೋಗೇಶ್ (23) ಬಂಧಿತನಾಗಿದ್ದಾನೆ.

ಭಾನುವಾರ ರಾತ್ರಿ 8 ಗಂಟೆ ಹೊತ್ತಿಗೆ ಕೋಟೆಹುಂಡಿ ಸಮೀಪದ ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಸರಕು ಸಾಗಣೆ ಆಟೊದಲ್ಲಿ ಟಿ.ಮಂಜುನಾಥ್, ಆರ್.ಮಂಜುನಾಥ್ ಹಾಗೂ ಮೂರ್ತಿ ಎಂಬುವವರು ಬರುತ್ತಿದ್ದರು. ಈ ವೇಳೆ ಯೋಗೇಶ್ ಪ್ಯಾಸೆಂಜರ್ ಆಟೊದಲ್ಲಿ ಬರುತ್ತಿದ್ದ. ಎರಡೂ ವಾಹನಗಳೂ ಪರಸ್ಪರ ಉಜ್ಜಿಕೊಂಡು ಹೋಗಿವೆ. ಈ ವಿಚಾರಕ್ಕೆ ಗಲಾಟೆ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಯೋಗೇಶ್ ಚಾಕುವಿನಿಂದ ಟಿ.ಮಂಜುನಾಥ್ ಹಾಗೂ ಆರ್.ಮಂಜುನಾಥ್ ಅವರಿಗೆ ಇರಿದಿದ್ದಾನೆ. ಈ ವೇಳೆ ಮೂರ್ತಿ ತಪ್ಪಿಸಿಕೊಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ADVERTISEMENT

ಟಿ.ಮಂಜುನಾಥ್ ಸ್ಥಳದಲ್ಲೆ ಮೃತಪಟ್ಟರೆ ಆರ್‌‌.ಮಂಜುನಾಥ್ ಆಸ್ಪತ್ರೆಯಲ್ಲಿ ಸೋಮವಾರ ನಸುಕಿನಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಜಯಪುರ ಠಾಣೆ ಪೊಲೀಸರು ಆರೋಪಿ ಯೋಗೇಶ್ ನನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.