ADVERTISEMENT

ಮೈಸೂರು ವಿಶ್ವವಿದ್ಯಾಲಯ: ಬಿ.ಕಾಂ. ಎಲ್‌ಎಲ್‌ಬಿಗೆ ಸಿಕ್ಕಿಲ್ಲ ಅನುಮೋದನೆ!

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 9:45 IST
Last Updated 30 ಜೂನ್ 2022, 9:45 IST
   

ಮೈಸೂರು: ಮೈಸೂರು ವಿಶ್ವವಿದ್ಯಾಲಯದಿಂದ ನಡೆಸಲಾಗುತ್ತಿರುವ ಬಿ.ಕಾಂ. ಎಲ್‌ಎಲ್‌ಬಿ ಕೋರ್ಸ್‌ಗೆ ಅನುಮೋದನೆ ಸಿಗದಿರುವುದು ಶಿಕ್ಷಣ ಮಂಡಳಿ ಸಭೆಯಲ್ಲಿ ಬಹಿರಂಗಗೊಂಡಿತು.

ಗುರುವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಧಾನಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ, ‘ವಿಶ್ವವಿದ್ಯಾಲಯದವರು ರಾಜಕಾರಣಿಗಳಿಗಿಂತಲೂ ಹೆಚ್ಚಿನ ರಾಜಕೀಯದಲ್ಲಿ ತೊಡಗಿದ್ದೀರಿ. ಎಲ್ಲದಕ್ಕೂ ನನ್ನ ಬಳಿ ದಾಖಲೆ ಇದೆ. ಅನುಮೋದನೆಯೇ ಇಲ್ಲದೆ ಕೋರ್ಸ್‌ ನಡೆಸುತ್ತಿದ್ದೀರಿ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಏನಾಗಬೇಕು?’ ಎಂದು ಕೇಳಿದರು.

ಪ್ರತಿಕ್ರಿಯಿಸಿದ ಕುಲಪತಿ ಹೇಮಂತ್‌ಕುಮಾರ್, ‘ಬಿ.ಎ. ಎಲ್‌ಎಲ್‌ಬಿಗೆ ಅನುಮೋದನೆ ದೊರೆತಿದೆ. ಬಿ.ಕಾಂ. ಎಲ್‌ಎಲ್‌ಬಿಗೆ ಅನುಮೋದನೆ ಕೋರಿ ವಕೀಲರ ಪರಿಷತ್ತಿಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಸಿಗಲಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದುದ’ ಎಂದು ತಿಳಿಸಿದರು.

ADVERTISEMENT

ಮೈಸೂರು ವಿಶ್ವವಿದ್ಯಾಲಯದಿಂದ ವೈದ್ಯಕೀಯ ಕಾಲೇಜು ಆರಂಭಕ್ಕೆ ಪ್ರಸ್ತಾವ ಸಲ್ಲಿಸುವಂತೆ ಮಂಜೇಗೌಡ ಸಲಹೆ ನೀಡಿದರು.

ಪ್ರತಿಕ್ರಿಯಿಸಿದ ಕುಲಪತಿ, ‘ಹಿಂದೆಯೂ ಪ್ರಸ್ತಾವ ಇತ್ತು. ಅದಕ್ಕೆ ₹ 250 ಕೋಟಿ ಅನುದಾನ ಬೇಕಾಗುತ್ತದೆ. 25 ಎಕರೆ ಜಾಗ ಬೇಕಾಗುತ್ತದೆ. ಜಾಗ ಒದಗಿಸಬಹುದು. ಸರ್ಕಾರದಿಂದ ಅನುದಾನ ತರುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ನಿರ್ವಹಿಸಬೇಕಾಗುತ್ತದೆ. ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಎಂಜಿನಿಯರಿಂಗ್ ನಿಕಾಯಕ್ಕೆ ಪ್ರತ್ಯೇಕ ಡೀನ್ ನೇಮಕಕ್ಕೆ ವಿಜ್ಞಾನ ಮತ್ತ ತಂತ್ರಜ್ಞಾನ ನಿಕಾಯದ ಡೀನ್ ಪ್ರೊ.ಬಸವರಾಜಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದರು. ‘ನಾನು ಬರೆಯುವ ಪತ್ರಗಳಿಗೆ ಕುಲಪತಿ, ಕುಲಸಚಿವರು ಪ್ರತಿಕ್ರಿಯಿಸುತ್ತಿಲ್ಲ. ಹಿರಿಯ ಪ್ರಾಧ್ಯಾಪಕನನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.