
ಮೈಸೂರು: ಹಿನಕಲ್ ರಿಂಗ್ರಸ್ತೆಯ ಕನ್ನಡ ವೃತ್ತದಲ್ಲಿ ವಿಜಯನಗರ 3ನೇ ಹಂತದಿಂದ 4ನೇ ಹಂತಕ್ಕೆ ಪ್ರವೇಶಿಸುವ ಪೂರ್ಣಯ್ಯ ನಾಲೆ ಈಗಲೂ ಜೀವಂತ!
50ರಿಂದ 100 ಮೀಟರ್ವರೆಗೂ ನಾಲೆಯು ವಿಸ್ತಾರವಾಗಿ ಹರಡಿಕೊಂಡಿರುವುದು ‘ದಿಶಾಂಕ್’ ಆ್ಯಪ್ನಲ್ಲಿ ಗೋಚರವಾಗುತ್ತದೆ. ನಾಲೆಯ ಹಳ್ಳದ ಭಾಗದಲ್ಲಿ ಮಳೆಗಾಲ ಮುಗಿದರೂ ಶುದ್ಧ ನೀರು ನಿಂತಿರುವುದು ಅಚ್ಚರಿ ಮೂಡಿಸುತ್ತದೆ.
ಒತ್ತುವರಿ ನಡೆಯುತ್ತಿರುವುದನ್ನು ತಪ್ಪಿಸುವ ಕೆಲಸವನ್ನು ಪಟ್ಟಣ ಪಂಚಾಯಿತಿ, ಮುಡಾ ಹಾಗೂ ಆಳುವ ಅಧಿಕಾರಿಗಳು ತುರ್ತಾಗಿ ಮಾಡಬೇಕಿದೆ. ಆದರೆ, ಬೋಗಾದಿ ಪಟ್ಟಣ ಪಂಚಾಯಿತಿ ಮುಂದೆಯೇ ನಾಲೆ ಹಾಗೂ ಬಫರ್ ವಲಯವನ್ನು ಮುಚ್ಚಿ ರಸ್ತೆಯನ್ನು ನಿರ್ಮಿಸಲಾಗಿದೆ.
ರಸ್ತೆಯ ಡಾಂಬರು, ಕಟ್ಟಡ ತ್ಯಾಜ್ಯದ ಜೊತೆಗೆ ರಸ್ತೆ ಮಾಡಲು ಬಳಸುವ ಜಲ್ಲಿಕಲ್ಲು ಹಾಗೂ ಇತರ ಸಾಮಗ್ರಿಗಳ ರಾಶಿಯನ್ನೇ ನಾಲೆ ಮೇಲೆಯೇ ಪೇರಿಸಿಡಲಾಗಿದೆ. ನಾಲೆಯ ಕುರುಹು ಇಲ್ಲದಂತೆ ಮಾಡಿರುವುದು ‘ಪ್ರಜಾವಾಣಿ’ ಪ್ರತಿನಿಧಿ ಸ್ಥಳೀಯ ನಿವಾಸಿಗಳ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದಾಗ ಕಂಡುಬಂತು.
ಬೋಗಾದಿ ಗ್ರಾಮ ಕಳೆದ ನಂತರ ಎದುರಾಗುವ ಪೂರ್ಣಯ್ಯ ನಾಲಾ ಸೇತುವೆ ಬಲಭಾಗಕ್ಕೆ ಹೊರಳಿದರೆ ನಾಲೆಯ ಏರಿಯೇ ರಸ್ತೆಯಾಗಿದೆ. ಆರಂಭದಲ್ಲಿ ದೊಡ್ಡದಾಗಿ ಕಾಣುವ ನಾಲೆಯು ತೂಬಿನಷ್ಟು ಕಿರಿದಾಗುತ್ತದೆ. ಪಾರ್ಕಿಂಗ್ಗಾಗಿ ನಾಲೆಯನ್ನೇ ಮುಚ್ಚಲಾಗಿದೆ. ಬಫರ್ ವಲಯವು ಹಳ್ಳದ ಭಾಗವನ್ನು ಕಟ್ಟಡ ತ್ಯಾಜ್ಯ ತುಂಬಲಾಗುತ್ತಿದೆ.
ಸ್ವಸ್ತಿಕ್ ಎನ್ಕ್ಲೇವ್ ಬಡಾವಣೆ, ಇಂಚರ ಬಡಾವಣೆ ದಾಟಿದಂತೆ ಒತ್ತುವರಿ ಅವ್ಯಾಹತವಾಗಿ ನಡೆದಿದೆ. ಬಸವನಹಳ್ಳಿಯಲ್ಲಿ ಮುಡಾ ನಾಲೆಯನ್ನು ಮುಚ್ಚಿ ರಸ್ತೆಗಳನ್ನು ಮಾಡುತ್ತಿರುವುದು ಕಂಡು ಬಂತು. ಸರ್ವೆ ನಂ 87, 78, 96, 62, 106, 59 ಹಾಗೂ 25ರಲ್ಲಿ ಒತ್ತುವರಿಯಾಗುತ್ತಿದೆ.
ನಾಲೆಯ ಮೇಲೆಯೇ ಮನೆಗಳು ಎದ್ದಿದ್ದು, ಕುರುಹು ಇಲ್ಲದಂತೆ ಮಾಡಲಾಗಿದೆ. ಎರಡು ಬೀದಿಗಳನ್ನು ಒತ್ತುವರಿ ಮಾಡಿಕೊಂಡಿರುವುದು ‘ದಿಶಾಂಕ್’ ಆ್ಯಪ್ನಲ್ಲಿ ಗೋಚರಿಸುತ್ತದೆ.
ನಾಲೆಯಲ್ಲಿ ನೀರು: ರಿಂಗ್ ರಸ್ತೆಯನ್ನು ದಾಟುವ ಮುನ್ನದ ಹಳ್ಳದ ಭಾಗವಿದ್ದು, ಮಳೆಗಾಲ ಕಳೆದರೂ ನಾಲೆಯಲ್ಲಿ ನೀರು ನಿಂತಿರುವುದು ಕಂಡು ಬಂತು. ಸರ್ವೆ 118 ಹಾಗೂ 114ರಲ್ಲಿ ಹಳ್ಳದ ಭಾಗವಿರುವ ಈ ಜಾಗದಲ್ಲಿ ನೀರಿನ ಒರತೆಯಿತ್ತು.
‘ಮೊದಲೆಲ್ಲ ದನ, ಕುರಿ ಮೇಯಿಸ್ತಿದ್ದೊ. ಸರ್ಕಾರಿ ಜಾಗಾನೆಲ್ಲ ನುಂಗಿ ನೀರು ಕುಡಿತಾವ್ರೆ. ಮನೆಯೆಲ್ಲಾ ಆಯ್ತಾವೆ. ದಿವಾನರ ಕಾವ್ಲಿ ಇನ್ನೊಂರಡು ವರ್ಸ ಎಲ್ಲ ಮುಚ್ಚೋಯ್ತದೆ ಸ್ವಾಮಿ’ ಎಂದು ಬೋಗಾದಿಯ ಮಹದೇವನಾಯ್ಕ ಬೇಸರ ವ್ಯಕ್ತಪಡಿಸಿದರು.
‘ರಿಂಗ್ ರಸ್ತೆಯ ಬದಿಯಲ್ಲಿ ವ್ಯಾಪಕ ಸರ್ಕಾರಿ ಭೂಮಿಯಿದ್ದು, ಅದು ಸಾರ್ವಜನಿಕರಿಗೇ ಸಿಗಬೇಕು. ನಾಲೆ ಒತ್ತುವರಿಯಾಗಿದ್ದರೆ ಕೂಡಲೇ ತೆರವುಗೊಳಿಸುವ ಇಚ್ಛಾಶಕ್ತಿಯನ್ನು ಅಧಿಕಾರಿಗಳು ಪ್ರದರ್ಶಿಸಬೇಕು’ ಎಂದು ಪರಿಸರವಾದಿ ಶೈಲಜೇಶ ‘ಪ್ರಜಾವಾಣಿ’ಗೆ ಹೇಳಿದರು.
‘ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಬಡಾವಣೆಯಾದ ವಿಜಯನಗರ ನಾಲ್ಕನೇ ಹಂತದಲ್ಲಿ ಹಸಿರುಪಟ್ಟಿ ನಿರ್ಮಾಣ ಮಾಡುವ ಅವಕಾಶವಿದ್ದು, ಅದನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮುಡಾ ಕೈಚೆಲ್ಲಬಾರದು. ಇಲ್ಲಿ ನಾಲೆಗೆ ಹಲವು ರಾಜಕಾಲುವೆಗಳೂ ಬಂದು ಸೇರುತ್ತವೆ. ಎತ್ತರದ ಭೂಮಿಯೂ ಇದೆ. ಹೆಚ್ಚು ಮಳೆಯಾದರೆ ಬೋಗಾದಿ ರಿಂಗ್ ರಸ್ತೆ ಜಂಕ್ಷನ್ನಲ್ಲಿ ಪ್ರವಾಹವಾಗುತ್ತದೆ. ಅದನ್ನು ತಪ್ಪಿಸಲು ನೀರು ಇಂಗಿಸುವ ವ್ಯವಸ್ಥೆ ಇಲ್ಲಿ ಆಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಪಟ್ಟಣ ಪಂಚಾಯಿತಿ ಮುಂದೆಯೇ ಒತ್ತುವರಿ ನಾಲೆಗೆ ಸೇರುತ್ತಿದೆ ಕಟ್ಟಡ ತ್ಯಾಜ್ಯ ಒತ್ತುವರಿ ತೆರವುಗೊಳಿಸಿ: ಪರಿಸರ ತಜ್ಞರು
‘ದೆಹಲಿ ರಿಡ್ಜ್ ಮಾದರಿ ಉದ್ಯಾನ’ ‘ಅರಾವಳಿ ಬೆಟ್ಟದ ತುದಿ ದೆಹಲಿಯಲ್ಲಿ ಕೊನೆಗೊಳ್ಳುತ್ತದೆ. ಅದನ್ನು ದೆಹಲಿ ರಿಡ್ಜ್ ಎನ್ನುತ್ತಾರೆ. ಈ ತಿಟ್ಟನ್ನು ಉದ್ಯಾನವಾಗಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಹಸಿರು ಪಟ್ಟಿ ಉಳಿಸಿಕೊಳ್ಳಲಾಗಿದೆ. ಅದೇ ಮಾದರಿಯಲ್ಲಿ ಪೂರ್ಣಯ್ಯ ನಾಲೆಯನ್ನು ಉಳಿಸಿಕೊಂಡರೆ ನಗರಕ್ಕೆ ದೊಡ್ಡ ಹಸಿರು ಪಟ್ಟಿ ಸಿಗಲಿದೆ’ ಎಂದು ಪರಿಸರವಾದಿ ಶೈಲಜೇಶ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಮೈಸೂರು ನಗರದ ಶ್ವಾಸಕೋಶವಾದ ಕುಕ್ಕರಹಳ್ಳಿ ಕೆರೆ ಚಾಮುಂಡಿ ಬೆಟ್ಟದಂತೆಯೇ ದೆಹಲಿಗೆ ದೆಹಲಿ ರಿಡ್ಜ್ ಉಸಿರಾಗಿದೆ. ಅದೇ ಮಾದರಿಯಲ್ಲಿ ನಾಲೆಯನ್ನು ಉದ್ಯಾನವಾಗಿಸುವ ಅವಕಾಶವನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಕೈ ಚೆಲ್ಲಬಾರದು. ದೊಡ್ಡ ಹಸಿರುಪಟ್ಟಿ ಹುಯಿಲಾಳು ಕೆರೆಯಿಂದ ಕುಕ್ಕರಹಳ್ಳಿ ಕೆರೆಗೆ ನಿರ್ಮಾಣವಾದರೆ ಮುಂದಿನ ಪೀಳಿಗೆಗೆ ನಾವು ಉಸಿರು ನೀಡಿದಂತೆ’ ಎಂದರು. ‘ಹಿರಿಯರು ಕಟ್ಟಿದ ಕೆರೆ–ಕಟ್ಟೆ ನಾಲೆ ರಾಜಕಾಲುವೆಗಳು ಜೀವವುಕ್ಕಿಸುವ ತಾಣಗಳು. ಅದನ್ನು ಉಳಿಸಿಕೊಳ್ಳಬೇಕು. ಬಾನಾಡಿಗಳು ಜೀವವೈವಿಧ್ಯ ನಾವು ಕಾಪಾಡಿದಂತೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.