ADVERTISEMENT

ಮೈಸೂರು | ಬೆಳೆ ನಷ್ಟ ತಪ್ಪಿಸುವ ಕೃತಕ ಬುದ್ಧಿಮತ್ತೆ: ಕೆ.ಎ.ಹರಿಣಿಕುಮಾರ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:01 IST
Last Updated 17 ಫೆಬ್ರುವರಿ 2026, 4:01 IST
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಕೆ.ಎ.ಹರಿಣಿಕುಮಾರ್ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ 
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಕೆ.ಎ.ಹರಿಣಿಕುಮಾರ್ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ    

ಮೈಸೂರು: ‘ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ ರೈತರ ಕೆಲಸವನ್ನು ಕಡಿಮೆಗೊಳಿಸಲಿದೆ. ಬೆಳೆ ನಷ್ಟ ತಪ್ಪಿಸಿ, ಆಹಾರ ಭದ್ರತೆ ನೀಡಲಿದೆ’ ಎಂದು ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಕೆ.ಎ.ಹರಿಣಿಕುಮಾರ್ ಪ್ರತಿಪಾದಿಸಿದರು.

ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಪ್ರಸಾರ ಭಾರತಿ, ಆಕಾಶವಾಣಿಯು‌ ರೇಡಿಯೊ ಕಿಸಾನ್ ದಿನದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ‘ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಕೃಷಿ ನವೋದ್ಯಮಗಳು’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.‌

‘ವೈಜ್ಞಾನಿಕ ದತ್ತಾಂಶಗಳ ಆಧಾರದ ಮೇಲೆ ಕೃತಕ ಬುದ್ಧಿಮತ್ತೆಯು ರೈತರು ಕೈಗೊಳ್ಳಬೇಕಾದ ನಿರ್ಧಾರವನ್ನು ಬಲಪಡಿಸುತ್ತದೆ. ಅನುಭವದ ಆಧರಿತ ಕೃಷಿ ಬದಲು, ವೈಜ್ಞಾನಿಕತೆ ಕಡೆಗೆ ಆಲೋಚಿಸುವಂತೆ ಮಾಡುತ್ತದೆ’ ಎಂದರು. 

ADVERTISEMENT

‘ಗೊಬ್ಬರ, ಕೀಟನಾಶಕ, ನೀರು ಸೇರಿದಂತೆ ಎಷ್ಟು ಬೇಕೊ ಅಷ್ಟೇ ಬಳಕೆ ಮಾಡಲು ಮಾಹಿತಿ ನೀಡುತ್ತದೆ. ಅಲ್ಲದೇ ಮಾರುಕಟ್ಟೆಯಲ್ಲಿ ಬೆಳೆ ದರ ಎಷ್ಟಕ್ಕೆ ನಿಲ್ಲುತ್ತದೆ? ಯಾವುದಕ್ಕೆ ಹೆಚ್ಚು ಬೇಡಿಕೆ ಬರುತ್ತದೆಂಬುದರ ಮಾಹಿತಿಯನ್ನು ಕೃಷಿಕರಿಗೆ ನಿಖರವಾಗಿ ದತ್ತಾಂಶ ಆಧರಿಸಿ ನೀಡುತ್ತದೆ. ಬೆಳೆ ಇಳುವರಿಯನ್ನು ಶೇ 30ರಷ್ಟು ಹೆಚ್ಚಿಸುತ್ತದೆ. ಏಕ ಬೆಳೆ ಬದಲು ಬಹುಬೆಳೆಯನ್ನು ಪ್ರೋತ್ಸಾಹಿಸುತ್ತದೆ’ ಎಂದು ಹೇಳಿದರು.

‘ಹವಾಮಾನ ಬದಲಾವಣೆಯಿಂದಾಗಿ ಬೆಳೆಯಲ್ಲಿ ಮಾರ್ಪಾಡು ಮಾಡಿಕೊಳ್ಳಲು ತಂತ್ರಜ್ಞಾನ ನೆರವಾಗುತ್ತದೆ. ಮಣ್ಣಿನ ಫಲವತ್ತತೆ, ಬೆಳೆಗೆ ಬೇಕಾದ ಗೊಬ್ಬರ, ನೀರಿನ ಪ್ರಮಾಣವನ್ನು ನಿರ್ಧರಿಸಿ, ಅನಗತ್ಯ ವೆಚ್ಚವನ್ನು ತಪ್ಪಿಸುವುದಷ್ಟೇ ಅಲ್ಲ, ಕೃಷಿಯನ್ನು ಲಾಭದಾಯಕವಾಗಿ ಮಾಡುತ್ತದೆ’ ಎಂದರು. 

ಸುಸ್ಥಿರ ಕೃಷಿಗೆ ಪ್ರೋತ್ಸಾಹ:

‘ಭಾರತದ ಭೂಮಿ ಸ್ವರ್ಗ, ಅದನ್ನು ನರಕ‌ ಮಾಡುತ್ತಿದ್ದೇವೆ. ಪಾಶ್ಚಾತ್ಯ ರಾಷ್ಟ್ರಗಳು ನೈಸರ್ಗಿಕ ವಿಕೋಪಗಳಿಂದ ನರಕವಾಗಿದ್ದವು. ಆದರೆ, ಅಲ್ಲಿನ ಜನರು ಸ್ವರ್ಗವಾಗಿಸಿದ್ದಾರೆ.‌ ನಮ್ಮ ದೇಶದ ಕೃಷಿ ಪರಂಪರೆಯನ್ನು ಆಧುನಿಕ ಪದ್ಧತಿಯ ಮಿಳಿತದೊಂದಿಗೆ ಸುಸ್ಥಿರವಾಗಿಸಿಕೊಳ್ಳುವ ಜವಾಬ್ದಾರಿಯು ಕ್ಷೇತ್ರದಲ್ಲಿರುವ ಎಲ್ಲರ ಕರ್ತವ್ಯವಾಗಿದೆ’ ಎಂದು ಹರಿಣಿಕುಮಾರ್ ಹೇಳಿದರು. 

‘ಕೃಷಿಯು ದೇಶದ ಶೇ 46ರಷ್ಟು ಜನರಿಗೆ ಉದ್ಯೋಗ ನೀಡಿದ್ದು, ನಿವ್ವಳ ರಾಷ್ಟ್ರೀಯ ಆದಾಯಕ್ಕೆ ಶೇ 18ರಷ್ಟು‌ ಕೊಡುಗೆ ನೀಡಿದೆ.‌ ಭವಿಷ್ಯದಲ್ಲಿ ಆಹಾರ ಕೊರತೆಯಾದರೆ ಅದು ದೇಶದ ದುರಂತವಾಗುತ್ತದೆ. ಹೀಗಾಗಿ ಆಧುನಿಕ ತಂತ್ರಜ್ಞಾನಗಳನ್ನು ಆಧರಿಸಿ ಕೃಷಿ ಮಾಡಬೇಕಿದೆ’ ಎಂದು ಹೇಳಿದರು.  

ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್, ಆಕಾಶವಾಣಿ ಸಹಾಯಕ ನಿರ್ದೇಶಕ ಮಂಜುನಾಥ್ ಬೇದ್ರೆ, ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ತಾಂತ್ರಿಕ ಅಧಿಕಾರಿ ಪಿ.ಆನಂದನ್ ಪಾಲ್ಗೊಂಡಿದ್ದರು.

ಆಕಾಶವಾಣಿ ರೇಡಿಯೊ ಕಿಸಾನ್ ದಿನಾಚರಣೆ ಕೃಷಿಯಲ್ಲಿ ಎ.ಐ ಬಳಕೆ ಕಾರ್ಯಾಗಾರ  ವಿವಿಧ ಜಿಲ್ಲೆಗಳಿಂದ 100 ರೈತರು ಭಾಗಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.