ADVERTISEMENT

ಪುರಾತತ್ವ ಮ್ಯೂಸಿಯಂ, ಗ್ಯಾಲರಿಗೆ ‘ತೊಡಕು’

2023ರ ಬಜೆಟ್‌ನಲ್ಲೇ ಘೋಷಣೆಯಾಗಿದ್ದ ಯೋಜನೆ ಕಾಗದದಲ್ಲೇ ಉಳಿದಿದೆ!

ಎಂ.ಮಹೇಶ್
Published 14 ಫೆಬ್ರುವರಿ 2026, 5:18 IST
Last Updated 14 ಫೆಬ್ರುವರಿ 2026, 5:18 IST
ಎ. ದೇವರಾಜು
ಎ. ದೇವರಾಜು   

ಮೈಸೂರು: ರಾಜ್ಯ ಸರ್ಕಾರದಿಂದ ನಗರದಲ್ಲಿ ‘ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ’ ನಿರ್ಮಾಣಕ್ಕೆ ಜಾಗದ ತೊಡಕು ಎದುರಾಗಿದೆ. ಜಾಗದ ವಿಷಯದಲ್ಲಿ ಡೋಲಾಯಮಾನ ಸ್ಥಿತಿಯೂ ನಿರ್ಮಾಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಜುಲೈ 7ರಂದು ಮಂಡಿಸಿದ್ದ ಬಜೆಟ್‌ನಲ್ಲಿ ಈ ಯೋಜನೆಯ ಬಗ್ಗೆ ಘೋಷಿಸಿದ್ದರು.

ಇದರ ಅನುಷ್ಠಾನದ ನಿಟ್ಟಿನಲ್ಲಿ, ಮೈಸೂರಿನಲ್ಲೇ ಕೇಂದ್ರ ಕಚೇರಿ ಹೊಂದಿರುವ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ನಡೆಸಿದ ಪ್ರಯತ್ನವು ಜಾಗದ ಮಾಲೀಕತ್ವದ ಕಗ್ಗಂಟಿನ ಕಾರಣದಿಂದಾಗಿ ಫಲ ನೀಡಿಲ್ಲ. ಪರಿಣಾಮ, ಯೋಜನೆಯು ಮುಖ್ಯಮಂತ್ರಿಯವರ ತವರಿನಲ್ಲೇ ಇಂದಿಗೂ ಬಜೆಟ್‌ ಪುಸ್ತಕದಲ್ಲೇ ಉಳಿಯುವಂತಾಗಿದೆ!

ADVERTISEMENT

ಚಾಮುಂಡಿವಿಹಾರದ ಬಳಿ: 

ನಗರದ ನಜರ್‌ಬಾದ್‌ನ ಚಾಮುಂಡಿವಿಹಾರ ಕ್ರೀಡಾಂಗಣದ ಬಳಿಯಲ್ಲಿರುವ ಜಾಗದಲ್ಲಿ ಯೋಜನೆ ಅನುಷ್ಠಾನದ ಘೋಷಣೆ ಆಗಿತ್ತು. ಎಆರ್‌ (ಆಗ್ಯೂಮೆಂಟೆಡ್ ರಿಯಾಲಿಟಿ) ಮತ್ತು ವಿಆರ್‌ (ವರ್ಚುವಲ್‌ ರಿಯಾಲಿಟಿ) ತಂತ್ರಜ್ಞಾನದೊಂದಿಗೆ ಅಂತರರಾಷ್ಟ್ರೀಯ ಗುಣಮಟ್ಟದ ‘ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ’ ನಿರ್ಮಿಸುವುದಾಗಿ ಪ್ರಕಟಿಸಲಾಗಿತ್ತು. ಅನುದಾನದ ಬಗ್ಗೆ ಉಲ್ಲೇಖಿಸಿರಲಿಲ್ಲ.

ಪಾರಂಪರಿಕ ವೈಶಿಷ್ಟ್ಯದ ವಿವಿಧ ಅರಮನೆಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ಸಾಂಸ್ಕೃತಿಕ ನಗರಿಗೆ ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೀಗೆ ಬರುವವರಿಗೆ ನಾಡಿನ ಕಲೆ, ಸಾಂಸ್ಕೃತಿಕ ಪರಂಪರೆ ಜೊತೆಗೆ ಪುರಾತತ್ವ, ವಾಸ್ತುಶಿಲ್ಪದ ಸಮೃದ್ಧ ಸಿರಿಯನ್ನು ವ್ಯವಸ್ಥಿತವಾಗಿ ಪ್ರದರ್ಶಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಮ್ಯೂಸಿಯಂ ನಿರ್ಮಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.

ವಸ್ತುಸಂಗ್ರಹಾಲಯವನ್ನು ಮತ್ತೊಂದು ಪ್ರವಾಸಿ ತಾಣವನ್ನಾಗಿ ರೂಪಿಸಿ ಪ್ರವಾಸಿಗರನ್ನು ಸೆಳೆಯುವ ಆಶಯ ಹೊಂದಲಾಗಿದೆ.

ಭಾಸ್ಕರ್‌ ನಾಯಕ್‌
ನಮ್ಮ ಇಲಾಖೆಯಿಂದ ಮ್ಯೂಸಿಯಂ ಹಾಗೂ ಕಲಾಗ್ಯಾಲರಿ ನಿರ್ಮಾಣಕ್ಕೆ ಎದುರಾಗಿರುವ ಜಾಗದ ಸಮಸ್ಯೆ ಇತ್ಯರ್ಥಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ
ಎ.ದೇವರಾಜು ಆಯುಕ್ತ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ಆ ಜಾಗ ಕ್ರೀಡಾ ಇಲಾಖೆಗೆ ಸೇರಿದ್ದಾಗಿದ್ದು ಅಲ್ಲಿ ಈಗಾಗಲೇ ಫುಟ್‌ಬಾಲ್‌ ಮೈದಾನ ನಿರ್ಮಿಸಲಾಗಿದೆ. ಗ್ಯಾಲರಿಗೆ ಕೊಡಲು ಜಾಗವಿಲ್ಲ
ಭಾಸ್ಕರ್ ನಾಯಕ್ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಇಲಾಖೆಯಿಂದ ಪ್ರಯತ್ನ...

ಯೋಜನೆಗೆ ಸಂಬಂಧಿಸಿದಂತೆ ಪರಂಪರೆ ಇಲಾಖೆಯಿಂದ ಡಿಪಿಆರ್‌ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಲು ಕ್ರಮ ವಹಿಸಲಾಗಿತ್ತು. ಆ ಇಲಾಖೆಯ ಕ್ರಿಯಾಯೋಜನೆಯಲ್ಲಿ ಡಿಪಿಆರ್‌ಗೆಂದೇ ₹ 5 ಲಕ್ಷವನ್ನು ಇಟ್ಟುಕೊಳ್ಳಲಾಗಿತ್ತು. ವರದಿ ಸಿದ್ಧವಾದ ನಂತರ ಸರ್ಕಾರಕ್ಕೆ ಕಳುಹಿಸಿ ಅಲ್ಲಿ ಅನುಮೋದನೆ ಸಿಕ್ಕ ಬಳಿಕ ಅನುದಾನ ಕೋರುವ ಉದ್ದೇಶ ಹೊಂದಲಾಗಿತ್ತು. ಅಂದಾಜು ₹ 75 ಕೋಟಿ ಬೇಕಾಗುತ್ತದೆಂದು ನಿರೀಕ್ಷಿಸಲಾಗಿತ್ತು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಈ ನಡುವೆ ಚಾಮುಂಡಿವಿಹಾರ ಕ್ರೀಡಾಂಗಣದ ಬಳಿಯಲ್ಲಿರುವ ಜಾಗ ನಮ್ಮದೆಂದು ಕ್ರೀಡಾ ಇಲಾಖೆಯು ವಾದ ಮಂಡಿಸಿರುವ ಕಾರಣದಿಂದಾಗಿ ಯೋಜನೆಯ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಅನುಷ್ಠಾನದ ಬಗ್ಗೆಯೂ ಅನುಮಾನ ಉಂಟಾಗಿದೆ.

ಆಯುಕ್ತರು ಹೇಳುವುದೇನು? 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜು ‘ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ’ ನಿರ್ಮಾಣದ ಬಗ್ಗೆ ಕಾನ್ಸೆಪ್ಟ್‌ ವಿನ್ಯಾಸಗೊಳಿಸಿ ಟೆಂಡರ್‌ ಕರೆದಿದ್ದೆವು. ಆದರೆ ಜಾಗ ನಮ್ಮದೆಂದು ಕ್ರೀಡಾ ಇಲಾಖೆಯವರು ಹೇಳಿದ್ದರಿಂದಾಗಿ ಅಡ್ಡಿಯಾಗಿದೆ’ ಎಂದು ತಿಳಿಸಿದರು. ‘ಈ ಸಂಬಂಧ ಜಾಗ ನಮ್ಮದೆಂದು ನಮ್ಮ ಬಳಿಯಲ್ಲಿರುವ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರಿಗೆ ಕಳುಹಿಸಿಕೊಟ್ಟಿದ್ದೇವೆ. ನಮ್ಮ ಬಳಿಯಲ್ಲಿರುವ ದಾಖಲೆಗಳ ಪ್ರಕಾರ ಆ ಜಾಗವನ್ನು ನಮ್ಮ ಇಲಾಖೆಗೆ ಮಂಜೂರು ಮಾಡಲಾಗಿದೆ.

ಬೇಲಿಯನ್ನೂ ಹಾಕಿದ್ದೇವೆ ಫಲಕವನ್ನೂ ನೆಟ್ಟಿದ್ದೇವೆ. ಜಾಗದ ಗೊಂದಲ ಬಗೆಹರಿದರೆ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ’ ಎನ್ನುತ್ತಾರೆ ಅವರು. ‘ಆ ಮ್ಯೂಸಿಯಂನಲ್ಲಿ ಜಿಲ್ಲೆಯ ಪುರಾತತ್ವ ಪರಂಪರೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವನ್ನು ಮಾಡಲಾಗುವುದು. ಜಿಲ್ಲೆಯ ಇತಿಹಾಸವನ್ನು ಬಿಂಬಿಸುವ ರೀತಿಯಲ್ಲಿ ಅದು ನಿರ್ಮಾಣಗೊಳ್ಳಲಿದೆ. ಅನುದಾನ ಎಷ್ಟು ಬೇಕಾಗುತ್ತದೆ ಎಂಬುದು ಡಿಪಿಆರ್‌ಗೆ ಅನುಮೋದನೆ ದೊರೆತ ಮೇಲೆ ಗೊತ್ತಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಸಿಗಲಿಲ್ಲವಾದರೆ...

ಒಂದು ವೇಳೆ ಕ್ರೀಡಾಂಗಣದ ಬಳಿ ಜಾಗ ಸಿಗಲಿಲ್ಲವಾದರೆ ‘ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ’ಯನ್ನು ಹಳೆಯ ಜಿಲ್ಲಾಧಿಕಾರಿ ಕಚೇರಿಯಲ್ಲೇ ರೂಪಿಸಲು ಚಿಂತಿಸಲಾಗುತ್ತಿದೆ. ಅದನ್ನು ಪ್ರವಾಸೋದ್ಯಮ ಇಲಾಖೆಯಿಂದ ಮಾಡಲಾಗುತ್ತದೆ. ಹೀಗಾಗಿ ಪರಂಪರೆ ಇಲಾಖೆಯ ಯೋಜನೆಯು ಸದ್ಯಕ್ಕೆ ಡೋಲಾಯಮಾನ ಸ್ಥಿತಿಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.