ಮೈಸೂರು: ದಸರಾದಲ್ಲಿ ಬಲೂನ್ ಮಾರಾಟ ಮಾಡಲು ಬಂದಿದ್ದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ, ಕನ್ನಡಾಂಬೆ ರಕ್ಷಣಾ ವೇದಿಕೆ ಮುಖಂಡರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಮಾತನಾಡಿ, ‘ಮೈಸೂರು ಎಂದರೆ ವಿಶ್ವ ಮಟ್ಟದಲ್ಲಿ ವಿಶೇಷ ಗೌರವವಿದೆ. ಆದರೆ, ಇಂತಹ ನಗರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಖಂಡನಾರ್ಹ. ಮೈಸೂರಿನ ಪೊಲೀಸರ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ. ಕೃತ್ಯ ಎಸಗಿದ ಪಾಪಿಯನ್ನು ಕೆಲವೇ ಗಂಟೆಯಲ್ಲಿ ಸೆರೆ ಹಿಡಿದಿದ್ದು, ಮತ್ತೊಂದೆಡೆ ಇದೇ ಸ್ಥಳದಲ್ಲಿ ಕೊಲೆ ಮಾಡಿದ ಆರೋಪಿಗಳನ್ನು ಸೆರೆ ಹಿಡಿಯುವ ಮೂಲಕ ತಮ್ಮ ದಕ್ಷತೆ ಪ್ರದರ್ಶಿಸಿದ್ದಾರೆ’ ಎಂದು ತಿಳಿಸಿದರು.
‘ಕೃತ್ಯ ಎಸಗಿದ ಆರೋಪಿಯನ್ನು ಮೂರು ತಿಂಗಳೊಳಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ರಾಜ್ಯ ಸರ್ಕಾರ ಆರ್ಥಿಕ ಸಹಕಾರ ನೀಡಬೇಕು. ಕಾರ್ಮಿಕ ಇಲಾಖೆ ಕುಟುಂಬದ ಜೊತೆ ನಿಂತು ಆರ್ಥಿಕವಾಗಿ ಸಹಾಯ ಮಾಡಬೇಕು. ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕ್ರಮ ವಹಿಸಿ ಮೈಸೂರಿನ ಘನತೆ ಉಳಿಸಬೇಕು’ ಎಂದು ಆಗ್ರಹಿಸಿದರು.
ವೇದಿಕೆಯ ಡಿಪಿಕೆ ಪರಮೇಶ್, ರಾಜ್ಯ ಖಜಾಂಚಿ ನಂಜುಂಡ, ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್, ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆ ಮಂಜುಳಾ, ಪದಾಧಿಕಾರಿಗಳಾದ ಸಿಂಧುವಳ್ಳಿ ಶಿವಕುಮಾರ್, ಮನುಗೌಡ, ಸೋಮಶೇಖರ, ಗೌತಮ್, ಅನುರಾಜ್ ಗೌಡ, ಮಂಜುನಾಥ್, ಸಿದ್ದೇಗೌಡ, ಕಿಕ್ಕೇರಿ ಕಿರಣ, ಶಿವಕುಮಾರ್, ಹೊನ್ನೇಗೌಡ, ರವಿಗೌಡ, ನಾಗರಾಜು, ರಾಜೇಗೌಡ, ಮಹದೇವಸ್ವಾಮಿ, ನೇಹಾ, ಗುಂಗ್ರಾಲ್ ಛತ್ರ ಲೋಕೇಶ್, ಕಿರಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.