
ಮೈಸೂರು: ‘ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ಪ್ರತಿಯೊಂದು ಸಂದೇಶವನ್ನು ಅರ್ಥ ಮಾಡಿಕೊಂಡು ನಮ್ಮ ಜೀವನವನ್ನು ಮುನ್ನಡೆಸಬೇಕು’ ಎಂದು ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಅವಧೂತ ದತ್ತ ಪೀಠದಲ್ಲಿ ಗೀತಾ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಂಪೂರ್ಣ ಭಗವದ್ಗೀತೆ ಪಾರಾಯಣ ಮತ್ತು ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
‘ನಮ್ಮ ಪೂರ್ವಜರು ಭಗವದ್ಗೀತೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ಹಿಂದೆ ಮಹಾತ್ಮರು ಮತ್ತು ಶ್ರೀಮಂತರು ಲಕ್ಷಾಂತರ ಚಿಕ್ಕ ಭಗವದ್ಗೀತೆ ಪುಸ್ತಕಗಳನ್ನು ಮುದ್ರಿಸಿ ಜನರಿಗೆ ಉಚಿತವಾಗಿ ಹಂಚುತ್ತಿದ್ದರು. ಆ ಸಂಪ್ರದಾಯ ಮತ್ತೆ ಮರುಕಳಿಸಬೇಕು. ದತ್ತ ಪೀಠದಲ್ಲಿ ಮುದ್ರಿತವಾದ ಪುಸ್ತಕಗಳನ್ನು ಭಕ್ತರು ಖರೀದಿಸಿ, ಅದನ್ನು ಕೊಂಡುಕೊಳ್ಳಲು ಶಕ್ತಿಯಿಲ್ಲದವರಿಗೆ ಉಚಿತವಾಗಿ ಹಂಚುವ ಸಂಕಲ್ಪ ಮಾಡಬೇಕು’ ಎಂದರು.
‘2026ರ ಮಾರ್ಚ್ 22ರಂದು ಹೈದರಾಬಾದ್ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಂಪೂರ್ಣ ಭಗವದ್ಗೀತೆ ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೆಹಲಿಯ ಭಾರತ ಮಂಟಪದಲ್ಲಿಯೂ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶ ವಿದೇಶಗಳಲ್ಲಿ ಗೀತಾ ಪಾರಾಯಣದ ಅರಿವು ಮೂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಚಿನ್ನದ ಪದಕ ಪ್ರದಾನ:
ಭಗವದ್ಗೀತೆಯನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿ ಒಪ್ಪಿಸಿದ ಸುಮಾರು 948ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಶ್ರೀಗಳು ಚಿನ್ನದ ಪದಕ ಹಾಗೂ ಬಹುಮಾನಗಳನ್ನು ವಿತರಿಸಿದರು. ಮೈಸೂರಿನ 'ಗೀತಾ ಪರಿವಾರ'ದ ಸದಸ್ಯರು ಮತ್ತು ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ಭಕ್ತರನ್ನು ಶ್ರೀಗಳು ಅಭಿನಂದಿಸಿದರು.
ಗೀತಾ ಜಯಂತಿ ಅಂಗವಾಗಿ ಸಂಪೂರ್ಣ ಭಗವದ್ಗೀತಾ ಪಾರಾಯಣ ನಡೆಯಿತು. 5 ಸಾವಿರಕ್ಕೂ ಹೆಚ್ಚು ಜನರು ಗೀತೆಯ ಸಂಪೂರ್ಣ 700 ಶ್ಲೋಕಗಳನ್ನು ಪಠಣ ಮಾಡಿದರು. 6 ವರ್ಷದಿಂದ ಮಕ್ಕಳಿಂದ 75 ವರ್ಷದವರೆಗಿನ ಭಕ್ತರು ಈ ಪಾರಾಯಣದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.