
ಮೈಸೂರು: ಚಾಮುಂಡಿ ಬೆಟ್ಟದ ಉಳಿವಿಗಾಗಿ ನೂರಾರು ನಾಗರಿಕರು, ಪರಿಸರ ಪ್ರಿಯರು ಭಾನುವಾರ ಬೆಳಿಗ್ಗೆ ಬೆಟ್ಟದ ಪಾದದಿಂದ ಹೆಜ್ಜೆ ಹಾಕಿದರು.
‘ಅಭಿವೃದ್ಧಿ ಯೋಜನೆ ಮತ್ತು ಮಾನವ ಹಸ್ತಕ್ಷೇಪದಿಂದ ಬೆಟ್ಟವು ನಲುಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಕೊಂಪೆಯಾಗಿದೆ. ಬಹುಮಹಡಿ ಕಟ್ಟಡಗಳು, ಮನೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಿ, ಒತ್ತುವರಿ ನಿಲ್ಲಿಸಿ’ ಎಂಬ ಘೋಷಣೆಗಳನ್ನು ಕೂಗಿದ ನಾಗರಿಕರು ಸಾವಿರ ಮೆಟ್ಟಿಲುಗಳನ್ನು ಏರಿ, ಪ್ಲೆಕಾರ್ಡ್ಗಳನ್ನು ಹಿಡಿದು ಜಾಗೃತಿ ಮೂಡಿಸಿದರು.
ಕಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ನಿಡಸೋಸಿ ಮಠದ ನಿಜಲಿಂಗೇಶ್ವರ ಸ್ವಾಮೀಜಿ, ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ‘ಪರಿಸರಕ್ಕಾಗಿ ನಾವು’ ಸಂಘಟನೆ ಅಧ್ಯಕ್ಷ ಎ.ಟಿ.ರಾಮಸ್ವಾಮಿ, ಪರಿಸರ ತಜ್ಞ ಕೃಪಾಕರ, ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ ಸೇರಿದಂತೆ ಮುಖಂಡರು ತೋಳಿಗೆ ಹಸಿರು ಪಟ್ಟಿ ಹಾಕಿಕೊಂಡು ಬೆಟ್ಟದ ಉಳಿವಿನ ಅಗತ್ಯವನ್ನು ಸಾರಿದರು.
ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ನಾಡಿನ ಎಲ್ಲ ಬೆಟ್ಟ– ಗುಡ್ಡಗಳನ್ನು ಉಳಿಸುವ ಜವಾಬ್ದಾರಿ 7 ಕೋಟಿ ಕನ್ನಡಿಗರ ಮೇಲಿದೆ. ನಿರ್ಮಲವಾದ ಪರಿಸರ ನಿರ್ಮಾಣದಲ್ಲಿಯೇ ದೇವರು ಇರುತ್ತಾನೆ. ಗದುಗಿನ ಜನರು ಸಂಘಟಿತರಾಗಿ ಕಪತ್ತಗುಡ್ಡದಲ್ಲಿ ಗಣಿಗಾರಿಕೆ ಬರದಂತೆ ನೋಡಿಕೊಂಡರು. ಮೈಸೂರಿನ ಪ್ರಜ್ಞಾವಂತರು ಅಭಿವೃದ್ಧಿ ಯೋಜನೆಗಳಿಂದ ನಲುಗಿರುವ ಚಾಮುಂಡಿ ಬೆಟ್ಟ ಉಳಿಸಿಕೊಳ್ಳಬೇಕು’ ಎಂದರು.
ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ದೇವರ ದರ್ಶನಕ್ಕೆ ದೇಗುಲಕ್ಕೆ ಬರುವವರು ಪವಿತ್ರ ಜಾಗವನ್ನು ಗಲೀಜು ಮಾಡಿದರೆ ಹೇಗೆ? ಸ್ವಚ್ಛತೆಯೇ ಆದ್ಯತೆಯಾಗಬೇಕು. ಜಾಗೃತರಾಗಿ ಕಸ ಮುಕ್ತ ಬೆಟ್ಟ ಆಗಿಸಬೇಕು. ಸ್ವಚ್ಛ ಪರಿಸರ ಸಾಕಾರಗೊಳ್ಳಬೇಕು’ ಎಂದು ಹೇಳಿದರು.
‘ಪರಿಸರಕ್ಕಾಗಿ ನಾವು’ ಸಂಘಟನೆ ಅಧ್ಯಕ್ಷ ಎ.ಟಿ.ರಾಮಸ್ವಾಮಿ, ‘ನಿಸರ್ಗದತ್ತವಾಗಿ ಚಾಮುಂಡಿ ಬೆಟ್ಟ ಸೃಷ್ಟಿಯಾಗಿದೆ. ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಲು, ತಿರುಪತಿ, ತಿರುವಣ್ಣಮಲೈನಲ್ಲಿ ಇರುವಂತೆಯೇ ಯಾರೂ ಪ್ಲಾಸ್ಟಿಕ್ ಕವರ್ಗಳನ್ನು ತೆಗೆದುಕೊಂಡು ಹೋಗದಂತೆ ಬೆಟ್ಟದ ಪಾದದಲ್ಲಿಯೇ ಪರಿಶೀಲನೆ ನಡೆಸಬೇಕು. ಅದರಿಂದ ತ್ಯಾಜ್ಯದ ಕೊಂಪೆ ಆಗಿರುವ ಬೆಟ್ಟದ ರಕ್ಷಣೆ ಸಾಧ್ಯವಾಗುತ್ತದೆ’ ಎಂದರು.
ಭೂ ಸ್ವರೂಪ ಉಳಿವು ಅಗತ್ಯ: ‘ಮನುಷ್ಯ ಹುಟ್ಟುವುದಕ್ಕಿಂತಲೂ ಮೊದಲು ಚಾಮುಂಡಿ ಬೆಟ್ಟವಿತ್ತು. ದಖನ್ ಪ್ರಸ್ಥಭೂಮಿಯ ದಕ್ಷಿಣದ ತುದಿಯಲ್ಲಿರುವ ಇದು, ಗುಲಾಬಿ ಗ್ರಾನೈಟ್ ಕಲ್ಲುಗಳಿಂದ ಕೂಡಿದೆ. ಬೆಟ್ಟದ ಕೆಳಗಿದ್ದ ಹುಲ್ಲುಗಾವಲು, ಕೆರೆಗಳು ಒತ್ತುವರಿಯಾಗಿವೆ. ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ’ ಎಂದು ಪರಿಸರ ತಜ್ಞ ಕೃಪಾಕರ ಕಳವಳ ವ್ಯಕ್ತಪಡಿಸಿದರು.
ಲೇಖಕಿ ಕುಸಮಾ ಆಯರಹಳ್ಳಿ ಮತ್ತು ತಂಡದವರು ‘ರೆಂಬೆ ಕೊಂಬೆಯ ಮ್ಯಾಲ’ ಮೊದಲಾದ ಗೀತೆಗಳನ್ನು ಹಾಡಿದರು.
ಬಿಜೆಪಿ ಹಿಂದುಳಿವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಪರಶುರಾಮೇಗೌಡ, , ಲೀಲಾ ಶಿವಕುಮಾರ್, ಒಡನಾಡಿಯ ಸ್ಟ್ಯಾನ್ಲಿ, ಕುಮುದಿನಿ ಅಚ್ಚಿ, ಗೋಕುಲ್ ಗೋವರ್ಧನ್, ಅರುಣ್, ಶೈಲಜೇಶ್, ಪ್ರಭಾ, ಲೀಲಾ ವೆಂಕಟೇಶ್, ಭಾಗ್ಯ ಶಂಕರ್, ಗೀತಾ, ಶ್ವೇತಾ, ಅಭಿಷೇಕ್, ಸುರೇಶ್ ಸುಬ್ಬರಾವ್, ರವಿ, ಪಿಯುಸಿಎಲ್ನ ಕಮಲ್ ಗೋಪಿನಾಥ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.