ADVERTISEMENT

ಮೈಸೂರಿನಲ್ಲಿ ಸೈಕಲ್ ದಿನ: ಮಹಾನಗರಪಾಲಿಕೆಯಿಂದ ಸ್ವಚ್ಛತಾ ಚಾಂಪಿಯನ್ನರಿಗೆ ಗೌರವ

ಮಹಾನಗರಪಾಲಿಕೆಯಿಂದ ಸ್ವಚ್ಛತಾ ಚಾಂಪಿಯನ್ನರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 7:30 IST
Last Updated 23 ಫೆಬ್ರುವರಿ 2026, 7:30 IST
ಮಹಾನಗರಪಾಲಿಕೆಯಿಂದ ಮೈಸೂರಿನ ಡಿ. ದೇವರಾಜ ಅರಸು ರಸ್ತೆಯಲ್ಲಿ ಭಾನುವಾರ ‘ಮೈಸೂರು ಸೈಕಲ್ ದಿನ’ ಕಾರ್ಯಕ್ರಮ ನಡೆಯಿತು
ಮಹಾನಗರಪಾಲಿಕೆಯಿಂದ ಮೈಸೂರಿನ ಡಿ. ದೇವರಾಜ ಅರಸು ರಸ್ತೆಯಲ್ಲಿ ಭಾನುವಾರ ‘ಮೈಸೂರು ಸೈಕಲ್ ದಿನ’ ಕಾರ್ಯಕ್ರಮ ನಡೆಯಿತು   

ಮೈಸೂರು: ನಗರದ ಪರಿಸರ ಸಂರಕ್ಷಣೆ ಮತ್ತು ನಾಗರಿಕರ ಆರೋಗ್ಯ ವೃದ್ಧಿಯ ಆಶಯದೊಂದಿಗೆ ಭಾನುವಾರ ‘ಮೈಸೂರು ಸೈಕಲ್ ದಿನ’ ಕಾರ್ಯಕ್ರಮ ನಡೆಯಿತು.

ಮಹಾನಗರ ಪಾಲಿಕೆ, ಜಿಐಝಡ್ ಇಂಡಿಯಾ ಸಹಯೋಗದಲ್ಲಿ ಇಎಸ್ಎಎಫ್ ಫೌಂಡೇಷನ್‌ ವತಿಯಿಂದ ದೇವರಾಜ ಅರಸು ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ಸೈಕಲ್ ಪ್ರೇಮಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಮನೆಯಿಂದ ಕಾರ್ಯಕ್ರಮದ ಸ್ಥಳದವರೆಗೆ ಬೈಸಿಕಲ್‌ನಲ್ಲಿ ಬಂದ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್‌ ಅವರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ಅವರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ADVERTISEMENT

ನಂತರ ಮಾತನಾಡಿದ ಅವರು, ‘ಮೈಸೂರನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ಉಳಿಸಲು ಇಂಧನ ರಹಿತ ವಾಹನಗಳ ಬಳಕೆ ಹಾಗೂ ಸಾರ್ವಜನಿಕ ಸಹಭಾಗಿತ್ವ ಅತ್ಯಗತ್ಯ’ ಎಂದು ಹೇಳಿದರು.

ಜಿಐಝಡ್ ಸಂಸ್ಥೆಯ ನೀತು ಜೋಸೆಫ್, ‘ಭಾರತ ಮತ್ತು ಜರ್ಮನಿ ಸರ್ಕಾರಗಳ ತಾಂತ್ರಿಕ ಸಹಕಾರದ ಎಸ್‌ಯುಎಂ–ಎಸಿಎ ಯೋಜನೆಯಡಿ ಹವಾಮಾನ ಸ್ನೇಹಿ ನಗರ ಸಾರಿಗೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ’ ಎಂದರು.

ವಿವಿಧ ಚಟುವಟಿಕೆ

ಸಾರ್ವಜನಿಕರಿಗೆ ಝುಂಬಾ ನೃತ್ಯ, ವಿದ್ಯಾರ್ಥಿಗಳಿಗಾಗಿ ರಸ್ತೆ ರಂಗೋಲಿ ಮತ್ತು ಜಲವರ್ಣ ಚಿತ್ರಕಲೆ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆದವು. ಇನ್ಮುಂದೆ ಪ್ರತಿ ತಿಂಗಳ 2ನೇ ಮತ್ತು 4ನೇ ಭಾನುವಾರ ಸೈಕಲ್ ದಿನ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು.

ಅತ್ಯುತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರು ಹಾಗೂ ನೈರ್ಮಲ್ಯ ಮೇಲ್ವಿಚಾರಕರನ್ನು ಗೌರವಿಸಲಾಯಿತು. ‘ಸ್ವಚ್ಛ ಸರ್ವೇಕ್ಷಣೆ-2025’ರ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ‘ಸ್ವಚ್ಛತಾ ಚಾಂಪಿಯನ್’ಗಳನ್ನು ಸನ್ಮಾನಿಸಲಾಯಿತು.

ಮನೆಯಲ್ಲೇ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ತಾರಸಿ ತೋಟ ಮಾಡಿದ ರಮಾ ಅಮರನಾಥ್, ಮುಬಾರಕ್ ಹಾಗೂ ವಿಕಾಸ್ ಅವರಿಗೆ ಪ್ರಶಸ್ತಿ ನೀಡಲಾಯಿತು. 6,800ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟ ‘ಟೀಂ ಮೈಸೂರು’, ಸ್ವಚ್ಛತಾ ಶ್ರಮದಾನ ಮಾಡಿದ ಪೃಥ್ವಿ ನೇತೃತ್ವದ ಎನ್.ಎಸ್.ಎಸ್. ತಂಡ ಹಾಗೂ ಅನಿಲ್ ಕುಮಾರ್ ರಾಮಯ್ಯ ನೇತೃತ್ವದ ಯುವರಾಜ ಕಾಲೇಜಿನ ಎನ್.ಸಿ.ಸಿ. ತಂಡಗಳನ್ನು ಗೌರವಿಸಲಾಯಿತು.

ಸ್ವಚ್ಛತಾ ರಾಯಭಾರಿಗಳಾದ ಚಿತ್ರನಟರಾದ ವಸಿಷ್ಠ ಸಿಂಹ– ಹರಿಪ್ರಿಯಾ ದಂಪತಿ, ‘ಬಿಗ್‌ಬಾಸ್’ ರಿಯಾಲಿಟಿ ಶೋ ಖ್ಯಾತಿಯ ಸೂರಜ್ ಸಿಂಗ್ ಹಾಗೂ ಅರುಣ್ ಯೋಗಿರಾಜು ವಿಜೇತರಿಗೆ ಬಹುಮಾನ ವಿತರಿಸಿದರು.

ಎಸ್‌ಬಿಎಂ ನೋಡಲ್ ಅಧಿಕಾರಿ ಮೃತ್ಯುಂಜಯ ಕೆ.ಎಸ್. ಪಾಲ್ಗೊಂಡಿದ್ದರು.

ಕಾರ್ಯಕ್ಕೆ ಶ್ಲಾಘನೆ...

30ಸಾವಿರಕ್ಕೂ ಹೆಚ್ಚು ಪ್ಲಾಸ್ಟಿಕ್ ಟೂತ್ ಬ್ರಶ್‌ಗಳನ್ನು ಸಂಗ್ರಹಿಸಿ ಸಂಸ್ಕರಿಸಿದ ಭರತ್‌ಕುಮಾರ್ ಹಾಗೂ ಹೆಚ್ಚುವರಿ ಆಹಾರವನ್ನು ಹಸಿದವರಿಗೆ ತಲುಪಿಸುತ್ತಿರುವ ‘ಸಂತೃಪ್ತಿ’ ಎನ್.ಜಿ.ಒ. ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಲಾಯಿತು. ಸಂಸ್ಥೆಗಳ ವಿಭಾಗದಲ್ಲಿ ‘ಸ್ವಚ್ಛ ಸರ್ಕಾರಿ ಕಚೇರಿ’ ಪ್ರಶಸ್ತಿಯನ್ನು ಆಯಿಷ್ ಚಾಮರಾಜೇಂದ್ರ ಮೃಗಾಲಯ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪಡೆದುಕೊಂಡವು. ಸ್ವಚ್ಛ ಆಸ್ಪತ್ರೆ ವಿಭಾಗದಲ್ಲಿ ನಾರಾಯಣ ಹೃದಯಾಲಯ ಅಪೊಲೊ ಬಿಜಿಎಸ್ ಹಾಗೂ ಜಯದೇವ ಆಸ್ಪತ್ರೆಗಳು ಪ್ರಶಸ್ತಿ ಗಳಿಸಿದವು. ಹೋಟೆಲ್‌ ವಿಭಾಗದಲ್ಲಿ ದಕ್ಷಿಣ ಪಾಕ ಮತ್ತು ಸದರ್ನ್ ಸ್ಟಾರ್ ಶಾಲಾ ವಿಭಾಗದಲ್ಲಿ ಪಿ.ಎಂ.ಶ್ರೀ. ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವನಿತಾ ಸದನ ಸಿ.ಕೆ.ಸಿ ಕಾನ್ವೆಂಟ್ ಮತ್ತು ನಿರ್ಮಲಾ ಕಾನ್ವೆಂಟ್‌ ಸ್ವಚ್ಛ ಪ್ರಶಸ್ತಿ ಮುಡಿಗೇರಿಸಿಕೊಂಡವು. ರೈಲು ನಿಲ್ದಾಣ ಮತ್ತು ಸಬ್‌ಅರ್ಬನ್‌ ಬಸ್ ನಿಲ್ದಾಣಗಳನ್ನು ಸ್ವಚ್ಛ ಸಾರಿಗೆ ಕೇಂದ್ರಗಳೆಂದು ಹಾಗೂ ರೈಲ್ವೆ ನಿಲ್ದಾಣದ ಆಟೊರಿಕ್ಷಾ ನಿಲ್ದಾಣ ಮತ್ತು ಗಾಯತ್ರಿಪುರಂನ ಜೈ ಕರ್ನಾಟಕ ಆಟೊರಿಕ್ಷಾ ನಿಲ್ದಾಣಗಳನ್ನು ಸ್ವಚ್ಛ ಆಟೊರಿಕ್ಷಾ ನಿಲ್ದಾಣಗಳೆಂದು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.