ಮೈಸೂರು: ಯದು ವಂಶದ ಸಂಪ್ರದಾಯದಂತೆ ವಿಜಯ ದಶಮಿಯಂದು (ಸೋಮವಾರ) ಅರಮನೆಯಲ್ಲಿ ವಿಜಯಯಾತ್ರೆ ನಡೆಯಿತು.
ಆಯುಧಗಳಿಗೆ ಉತ್ತರ ಪೂಜೆ ನೆರವೇರಿಸಲಾಯಿತು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆ ನಡೆಸಿದರು.
ಅರಮನೆಯಿಂದ ಭುವನೇಶ್ವರಿ ದೇವಸ್ಥಾನದಲ್ಲಿರುವ ಬನ್ನಿ ಮಂಟಪದವರೆಗೆ ಯದುವೀರ್ ಕಾರಿನಲ್ಲೇ ಬಂದರು. ಈ ಬಾರಿ ಕಂಚಿನ ಪಲ್ಲಕ್ಕಿಯನ್ನು ಏರಲಿಲ್ಲ. ಮಂಗಳವಾದ್ಯ ಹಾಗೂ ನಾದಸ್ವರದ ತಂಡ ಕಾರಿನ ಮುಂದೆ ಸಾಗಿದವು.
ಕಂಚಿನ ರಥದಲ್ಲೇ ಬಂದ ಪಟ್ಟದ ಕತ್ತಿ ತೆಗೆದುಕೊಂಡು ಹೋದ ಯದುವೀರ್, ಅರಮನೆಯ ಆವರಣದೊಳಗಿರುವ ಭುವನೇಶ್ವರಿ ದೇವಾಲಯದ ಬಳಿಯಿರುವ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಂಗಳವಾದ್ಯ ಮೊಳಗಿದವು. ಪುರೋಹಿತರ ತಂಡ ವೇದ–ಮಂತ್ರ ಪಠಿಸಿತು.
ವಿಜಯಯಾತ್ರೆ ಮುಗಿದ ತಕ್ಷಣವೇ ಚಾಮುಂಡೇಶ್ವರಿ ಅಮ್ಮನವರನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿತೊಟ್ಟಿಗೆ ಕರೆದೊಯ್ಯಲಾಯಿತು.
ಪಟ್ಟದ ಹಸು, ಕುದುರೆ, ಆನೆ ವಿಜಯಯಾತ್ರೆಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.
ಅರಮನೆ ಮುಂಭಾಗದ ಗ್ಯಾಲರಿಯಲ್ಲಿ ಪುತ್ರ ಆದ್ಯವೀರ್ ಜೊತೆ, ಯದುವೀರ್ ಅವರ ವಿಜಯಯಾತ್ರೆಯನ್ನು ತ್ರಿಷಿಕಾ ಕುಮಾರಿ ಕಣ್ತುಂಬಿಕೊಂಡ ಚಿತ್ರಣ ಗೋಚರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.