ADVERTISEMENT

ಮೈಸೂರು: ಗರಿಗೆದರಿದ ಸಾಂಸ್ಕೃತಿಕ ವೈಭವ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 18:05 IST
Last Updated 26 ಸೆಪ್ಟೆಂಬರ್ 2022, 18:05 IST
   

ಮೈಸೂರು: ಹೊಂಬಣ್ಣದ ಅಂಬಾವಿಲಾಸ ಅರಮನೆಯ ವಿದ್ಯುತ್‌ ದೀಪಾಲಂಕಾರ ಆನ್ ಆಗುತ್ತಿದ್ದಂತೆಯೇ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಅಲ್ಲಿ ನೆರೆದಿದ್ದವರಿಂದ ಕರತಾಡನ–ಶಿಳ್ಳೆಯ ಹರ್ಷೋದ್ಗಾರ ಮೊಳಗಿತು.

ಸಾವಿರಾರು ಮಂದಿಯ ಸಮ್ಮುಖದಲ್ಲಿ ಹಾಗೂ ವರ್ಣರಂಜಿತ ವೇದಿಕೆಯಲ್ಲಿ ವೈವಿಧ್ಯಮಯ ನೃತ್ಯ–ಸಂಗೀತ ಕಾರ್ಯಕ್ರಮಗಳು ಗರಿಗೆದರಿದವು. ಇದರೊಂದಿಗೆ, ಅರಮನೆ ಆವರಣ, ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ ಸಂಗೀತ ಸಭಾ, ಚಿಕ್ಕಗಡಿಯಾರ, ಪುರಭವನ, ಕಲಾಮಂದಿರದ ಕಿರು ರಂಗಮಂದಿರ, ನಂಜನಗೂಡಿನ ಆರ್‌.‍ಪಿ.ರಸ್ತೆಯ ಅರಮನೆ ಮಾಳದ ವೇದಿಕೆಗಳಲ್ಲಿ ನಡೆಯಲಿರುವ ಸಾಂಸ್ಕೃತಿಕ ಸಡಗರ ವಿಧ್ಯುಕ್ತ ಆರಂಭ ಕಂಡಿತು. ಅ.3ರವರೆಗೆ ಈ ವೇದಿಕೆಗಳಲ್ಲಿ ನಾಡಿನ ವಿವಿಧ ಭಾಗದ ಕಲಾವಿದರಿಂದ ಪ್ರತಿಭೆಯ ಹೊನಲು ಹರಿಯಲಿದೆ.

ಅಮೃತ ಭಾರತಿಗೆ ಕನ್ನಡದಾರತಿ:ಬೆಂಗಳೂರಿನ ಮಂಜುಳಾ ಪರಮೇಶ್‌ ನೇತೃತ್ವದ ಸಪ್ತಸ್ವರ ಆರ್ಟ್ಸ್‌ ಮತ್ತು ಕ್ರಿಯೇಷನ್ಸ್‌ ತಂಡದವರು ‘ಅಮೃತ ಭಾರತಿಗೆ ಕನ್ನಡದಾರತಿ’ ನೃತ್ಯರೂಪಕ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ಸೇನಾನಿಗಳು ನೀಡಿದ ಕೊಡುಗೆ, ತ್ಯಾಗ–ಬಲಿದಾನ, ಸ್ವಾತಂತ್ರ್ಯ ಚಳವಳಿಗೆ ಕರುನಾಡು ನೀಡಿದ ಕೊಡುಗೆ, ನಮ್ಮಲ್ಲಿನ ವೀರಯೋಧರು ಮೊದಲಾದವರ ಸ್ಮರಣೆಯನ್ನು ನೃತ್ಯರೂಪಕ ವೇದಿಕೆಗೆ ತಂದಿತು. ಕಲಾವಿದರು–ಕಲಾವಿದೆಯರು ನಾಡಿನ ಶೌರ್ಯ–ಸಾಹಸ ಬಿಂಬಿಸುವ ಇತಿಹಾಸವನ್ನು ನೃತ್ಯದ ಮೂಲಕ ಕಟ್ಟಿಕೊಟ್ಟರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದರು.

ADVERTISEMENT

ಕಾರ್ಯಕ್ರಮದ ವೇಳೆ, ತಾಂತ್ರಿಕ ಕಾರಣದಿಂದಾಗಿ ಕೆಲವು ನಿಮಿಷ ‘ಫೋಕಸ್‌ ದೀಪ’ ಆಫ್‌ ಆಗಿತ್ತು. ಇದನ್ನು ಲೆಕ್ಕಿಸದೆ, ಕಲಾವಿದೆಯರು ಕತ್ತಲೆಯಲ್ಲೂ ನೃತ್ಯ ಮಾಡಿ ಉತ್ಸಾಹ ಪ್ರದರ್ಶಿಸಿದರು. ಭಾರತಿಗೆ ಕನ್ನಡದ ಆರತಿಯನ್ನು ಬೆಳಗಿದರು.

ಬಳಿಕ ಮೈಸೂರಿನ ಹಿರಿಯ ಗಾಯಕಿ ಎಚ್‌.ಆರ್‌.ಲೀಲಾವತಿ ಹಾಗೂ ತಂಡದವರು ಸುಗಮ ಸಂಗೀತದ ಗಾನಸುಧೆ ಹರಿಸಿ ಪ್ರೇಕ್ಷಕರನ್ನು ರಂಜಿಸಿದರು.

ಇದಕ್ಕೂ ಮುನ್ನ, ಯದುನಾಥ್ ಮತ್ತು ಗುರುರಾಜ್‌ ತಂಡದವರು ನಾದಸ್ವರ, ಕಿರಾಳು ಮಹೇಶ್ ಮತ್ತು ತಂಡದವರು ವೀರಭದ್ರ ಕುಣಿತವನ್ನು ಪ್ರದರ್ಶಿಸಿದರು.

ಮಾವುತರ ಮಕ್ಕಳಿಂದ ವೀಕ್ಷಣೆ: ದಸರಾ ಸಾಂಸ್ಕೃತಿಕ ಉಪ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವು ಸಂಗೀತ–ಕಲೆಗಳ ರಸಿಕರಿಗೆ ರಸದೌತಣವನ್ನು ಉಣಬಡಿಸಿತು. ಒಂದೆಡೆ ಪುಷ್ಪ ಪ್ರದರ್ಶನ ಹಾಗೂ ಇನ್ನೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್‌ ಪ್ರೇಕ್ಷಕರಿಗೆ ಮುದ ನೀಡಿತು.

ಅರಮನೆ ಆವರಣದ ವರಾಹ ದ್ವಾರದ ಬಳಿ ಸಜ್ಜುಗೊಳಿಸಿರುವ ಪುಷ್ಪ ಪ್ರದರ್ಶನವೂ ಜನರನ್ನು ಆಕರ್ಷಿಸಿತು. ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬಂದಿರುವ ಮಾವುತರು–ಕಾವಾಡಿಗಳ ಮಕ್ಕಳು ಕೂಡ ‘ಮಾಧ್ಯಮದವರ ಗ್ಯಾಲರಿ’ಯಲ್ಲಿ ಕುಳಿತು ಸಾಂಸ್ಕೃತಿಕ ಕಾರ್ಯುಕ್ರಮವನ್ನು ವೀಕ್ಷಿಸಿದ್ದುಗಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.