ಮೈಸೂರು: ದಸರಾ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿಯಿಂದ ಇಲ್ಲಿನ ಸಿದ್ಧಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಆವರಣದಲ್ಲಿ ಸೆ.22ರಿಂದ 30ರವರೆಗೆ ರಾಜ್ಯ ಹಾಗೂ ದೇಶದ ವಿವಿಧ ಕಲಾಪ್ರಾಕಾರಗಳ ರಸದೌತಣ ಉಣಬಡಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಎ.ದೇವರಾಜ್ ಕಾರ್ಯಕ್ರಮಗಳ ವಿವರ ನೀಡಿದರು.
‘ತೊಗಲುಗೊಂಬೆ ಭಿತ್ತಿ ಚಿತ್ರಕಲಾ ಶಿಬಿರ ಮತ್ತು ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲಾ ಪ್ರದರ್ಶನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಸೆ.22ರ ಸಂಜೆ 4ಕ್ಕೆ ಚಾಲನೆ ನೀಡುವರು. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸಹಕಾರದಲ್ಲಿ ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲಾ ಪ್ರದರ್ಶನ ಮತ್ತು ಸಮಕಾಲೀನ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ತೊಗಲುಗೊಂಬೆ ಭಿತ್ತಿ ಚಿತ್ರಕಲಾ ಪ್ರದರ್ಶನಕ್ಕೆ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗ ನೀಡಿದೆ’ ಎಂದು ತಿಳಿಸಿದರು.
ರಾಜ್ಯ ಮಟ್ಟದ ಕಲಾ ಪ್ರದರ್ಶನ: ‘ರಾಜ್ಯದ ವಿವಿಧ ಭಾಗಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರನ್ನು ಪ್ರೋತ್ಸಾಹಿಸುವ ಮತ್ತು ಸಾರ್ವಜನಿಕರಿಗೆ ಕಲೆಗಳ ವಿವಿಧ ಪ್ರಾಕಾರಗಳನ್ನು ಪರಿಚಯಿಸುವ ಉದ್ದೇಶದಿಂದ ರಾಜ್ಯಮಟ್ಟದ ಕಲಾ ಪ್ರದರ್ಶನ ರೂಪಿಸಲಾಗಿದೆ. ಕಲಾವಿದರಿಂದ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ. ಉತ್ತಮ ಕಲಾಕೃತಿಗಳನ್ನು ತೀರ್ಪುಗಾರರಿಂದ ಆಯ್ಕೆ ಮಾಡಿಸಿ ಪ್ರದರ್ಶಿಸಲಾಗುವುದು, ಬಹುಮಾನವನ್ನೂ ನೀಡಲಾಗುವುದು. ಸೆ.26ರಿಂದ 30ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ ಪ್ರದರ್ಶನವ ನಡೆಯಲಿದ್ದು, ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸೆ.26ರಂದು ಸಂಜೆ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು’ ಎಂದು ಮಾಹಿತಿ ನೀಡಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಇದೇ ಮೊದಲಿಗೆ ಭಿತ್ತಿಶಿಲ್ಪ ಶಿಬಿರ ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ಸೆ.2ರಿಂದ 8ರವರೆಗೆ ನಡೆದಿದೆ. 2ನೇ ಹಂತದಲ್ಲಿ ಸೆ.22ರಿಂದ 28ರವರೆಗೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಹಿರಿಯ ಶಿಲ್ಪ ಕಲಾವಿದರನ್ನು ಅಕಾಡೆಮಿಯಿಂದ ಆಯ್ಕೆ ಮಾಡಿ ಕಳುಹಿಸಲಾಗಿದೆ. ಈ ಭಿತ್ತಿಶಿಲ್ಪಗಳು ಈಗ ತಯಾರಿಯ ಹಂತದಲ್ಲಿದ್ದು, ಸೆ.28ರಂದು ಉಸ್ತುವಾರಿ ಸಚಿವ ಮಹದೇವಪ್ಪ ಅನಾವರಣಗೊಳಿಸುವರು. ಅವುಗಳನ್ನು ಕಾವಾ ಆವರಣದಲ್ಲಿ ಶಾಶ್ವತವಾಗಿ ಪ್ರದರ್ಶಿಸಲಾಗುವುದು’ ಎಂದು ತಿಳಿಸಿದರು.
ಉಪ ಸಮಿತಿಯ ಕಾರ್ಯಾಧ್ಯಕ್ಷೆ ನಿರ್ಮಲಾ ಮಠಪತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ರಮೇಶ್, ಕಾವಾದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜುಪ್ರಸಾದ್, ಕಾರ್ಯದರ್ಶಿ ಸೂರ್ಯ ಹಾಗೂ ನಿರ್ದೇಶಕ ಯೋಗಾನಂದ, ಭಿತ್ತಿ ಶಿಲ್ಪ ಶಿಬಿರದ ನಿರ್ದೇಶಕ ಉಲ್ಲಾಸ್ಕರ್ ಡೇ ಪಾಲ್ಗೊಂಡಿದ್ದರು.
ಹೋದ ವರ್ಷ ₹ 22 ಲಕ್ಷ ದೊರೆತಿತ್ತು. ಈ ಬಾರಿ ₹35 ಲಕ್ಷ ಅನುದಾನ ಕೋರಿದ್ದೇವೆ. ಇನ್ನೂ ಹಣ ಬಿಡುಗಡೆ ಆಗಿಲ್ಲಎ.ದೇವರಾಜ್ ಉಪ ವಿಶೇಷಾಧಿಕಾರಿ
ಕಲಾಕೃತಿಗಳ ಪ್ರದರ್ಶನ
ಪ್ರಾತ್ಯಕ್ಷಿಕೆ ಮೇಳ ಭೋಪಾಲ್ನ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ಹಾಗೂ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ರಾಷ್ಟ್ರಮಟ್ಟದ ಕಲಾವಿದರು ರಚಿಸಿರುವ ಕರಕುಶಲ ಕಲಾಕೃತಿಗಳ ಪ್ರದರ್ಶನ ಪ್ರಾತ್ಯಕ್ಷಿಕೆ ಹಾಗೂ ಮಾರಾಟ ಮೇಳವನ್ನು ಸೆ.26ರಿಂದ 30ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವರಾಜ್ ತಿಳಿಸಿದರು. ಬುಟ್ಟೆ ನೇಯ್ಗೆ ಲೆದರ್ ಕ್ರಾಫ್ಟ್ ವರ್ಲಿ ಚಿತ್ರಕಲೆ ಸೆಣಬು ಕಲಾಕೃತಿಗಳು ಢಾರಿ ಕಲೆ ಚೆರಿಯಾಲ್ ಚಿತ್ರಕಲೆ ಮುತ್ತಿನ ಕಲಾಕೃತಿಗಳು ಡೋಕ್ರಾ ಕಲೆ ಟೈ ಅಂಡ್ ಡೈ ಕಲೆ ಟೆರ್ರಾಕೋಟ ರೋಸ್ವುಡ್ ಇನ್ಲೇ ಶ್ರೀಗಂಧದ ಕಲೆ ಬಿದರಿಕಲೆ ಚನ್ನಪಟ್ಟಣ ಆಟಿಕೆ ಮೈಸೂರು ಸಾಂಪ್ರದಾಯಿಕ ಕಲಾಕೃತಿಗಳು ಕಸೂತಿ ಕಲೆ ಗಂಜಿಫಾ ಮೊದಲಾದ ಕಲಾಕೃತಿಗಳು ಇರಲಿವೆ ಎಂದು ಮಾಹಿತಿ ನೀಡಿದರು.
‘ಕಲಾ ಜಾತ್ರೆ’ಯಲ್ಲಿ ಉಚಿತ ಮಳಿಗೆ
‘ಕಲಾವಿದರು–ಕಲಾಸಕ್ತರ ನಡುವೆ ನೇರ ಸಂಪರ್ಕ ಕಲ್ಪಿಸಲು ಹಾಗೂ ಜನಸಾಮಾನ್ಯರು ವಿದ್ಯಾರ್ಥಿಗಳು ಹಾಗೂ ಅರಳುತ್ತಿರುವ ಕಲಾವಿದರ ಕಲಾಕೃತಿಗಳಿಗೆ ವೇದಿಕೆ ಒದಗಿಸಲು ಸೆ.28ರಂದು ಬೆಳಿಗ್ಗೆ 10ರಿಂದ ಸಂಜೆವರೆಗೆ ಕಲಾಜಾತ್ರೆ ಆಯೋಜಿಸಲಾಗಿದೆ. ಪ್ರದರ್ಶನದೊಂದಿಗೆ ಮಾರಾಟವೂ ನಡೆಯಲಿದೆ. ಒಟ್ಟು 80 ಮಳಿಗೆಗಳಿರಲಿವೆ. ಅರ್ಜಿ ಸಲ್ಲಿಸುವ ಕಲಾವಿದರಿಗೆ ಉಚಿತವಾಗಿ ಮಳಿಗೆ ನೀಡಲಾಗುವುದು. ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ’ ಎಂದು ದೇವರಾಜ್ ಮಾಹಿತಿ ನೀಡಿದರು.
ವಿಶೇಷಗಳು
ಶಾಲಾ ಮಕ್ಕಳಲ್ಲಿ ಅಡಗಿರುವ ಕಲಾ ಪ್ರತಿಭೆ ಉತ್ತೇಜಿಸಲು ಸೆ.26ರಂದು ಮಧ್ಯಾಹ್ನ 3ಕ್ಕೆ ಸ್ಥಳದಲ್ಲೇ ಚಿತ್ರ ಬಿಡಿಸುವ ಮತ್ತು ಮಣ್ಣಿನ ಕಲಾಕೃತಿ ರಚಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತ ಮಕ್ಕಳಿಗೆ ಸೆ.28ರಂದು ಬಹುಮಾನ ನೀಡಲಾಗುವುದು. ಮಕ್ಕಳಿಗೆ ವಿವಿಧ ಭಾಗಗಳ ಸಾಂಪ್ರದಾಯಿಕ ಕಸುಬುಗಳ ಪರಿಚಯ ಮಾಡಿಕೊಡಲು ಕುಂಬಾರಿಕೆ ನೇಯ್ಗೆ ಮೊದಲಾದವುಗಳ ಪ್ರಾತ್ಯಕ್ಷಿಕೆ ನಡೆಯಲಿದೆ.
*ವಿವಿಧ ಕಲಾಪ್ರಾಕಾರಗಳಲ್ಲಿ ಸಾಧನೆ ಮಾಡಿರುವ ಕಲಾವಿದರು ವಿವಿಧ ಕ್ಷೇತ್ರಗಳ ವಿದ್ವಾಂಸರ ಕುರಿತು ಸಂಗ್ರಹಿಸಲಾದ ಸಾಕ್ಷ್ಯಚಿತ್ರಗಳ ಪ್ರದರ್ಶನವನ್ನು ಸೆ.23ರಿಂದ 30ರವರೆಗೆ ನಿತ್ಯ ಮಧ್ಯಾಹ್ನ 2ರಿಂದ 4.30ರವರೆಗೆ ಹಮ್ಮಿಕೊಳ್ಳಲಾಗಿದೆ.
ನಿತ್ಯ ಸಂಜೆ 4.30ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ.
ಸೆ.26ರಿಂದ 30ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕರಕುಶಲಕರ್ಮಿಗಳಿಂದ ಪ್ರಾತ್ಯಕ್ಷಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.