ನಗರದಲ್ಲಿ ಮಂಗಳವಾರ ಭಾರತೀಯ ವಾಯುಪಡೆಯ ‘ಸೂರ್ಯಕಿರಣ್’ ತಂಡವು ವೈಮಾನಿಕ ಪ್ರದರ್ಶನದ ತಾಲೀಮು ನಡೆಸಿತು
ಪ್ರಜಾವಾಣಿ ಚಿತ್ರ: ಅನೂಪ್ರಾಘ ಟಿ.
ಮೈಸೂರು: ಶರವೇಗದಲ್ಲಿ ಹಾರಿದ ಜೆಟ್ಗಳು ಬಾನಂಗಳದಲ್ಲಿ ಸೃಷ್ಟಿಸಿದ ಚಮತ್ಕಾರ ಕಂಡು ಪ್ರೇಕ್ಷಕರು ಬೆರಗಾದರು.
ಬನ್ನಿಮಂಟಪ ಪಂಜಿನ ಕವಾಯತು ಮೈದಾನದ ಬಳಿ ಭಾರತೀಯ ವಾಯುಪಡೆಯ ‘ಸೂರ್ಯಕಿರಣ್’ ತಂಡವು ಮಂಗಳವಾರ ವೈಮಾನಿಕ ಪ್ರದರ್ಶನದ ತಾಲೀಮು ನಡೆಸಿತು. ಸುಮಾರು 20 ನಿಮಿಷ ಕಾಲ ಆಗಸದಲ್ಲಿ ಜೆಟ್ಗಳ ಕೌಶಲಯುತ ಹಾರಾಟ ರೋಮಾಂಚನಗೊಳಿಸಿತು.
ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಗಂಟೆಗೆ ಸುಮಾರು 1500 ಕಿ.ಮೀ. ವೇಗದಲ್ಲಿ ಹಾರಿಬಂದ 9 ಜೆಟ್ಗಳು ಮೈಸೂರಿನಲ್ಲಿ ಮೋಡಗಳ ಕೆಳಗೆ ವರ್ಣಮಯ ರೀತಿಯಲ್ಲಿ ಹೊಗೆಯುಗುಳುತ್ತ ನಾನಾ ಕಸರತ್ತು ನಡೆಸಿದವು. ಆಗಸದಲ್ಲಿ ಹೃದಯದ ಆಕೃತಿ ಮೂಡಿಸಿ, ನೆರೆದ ಅಲ್ಪಸಂಖ್ಯೆಯ ಪ್ರೇಕ್ಷಕರಿಗೆ ಮುದ ನೀಡಿದವು.
ಒಮ್ಮೆ ಕೆಂಬಣ್ಣದ ಹೊಗೆಯನ್ನು ಉಗುಳುತ್ತ ಸಾಗಿದರೆ, ಮತ್ತೊಮ್ಮೆ ಶ್ವೇತ ವರ್ಣ, ನಂತರದಲ್ಲಿ ತ್ರಿವರ್ಣ ಗಮನ ಸೆಳೆದವು. 10ಕ್ಕೂ ಹೆಚ್ಚು ಮಾದರಿಗಳನ್ನು ತಂಡವು ನಿರೂಪಕಿ ಕವಾಲ್ ಸಂಧು ಕನ್ನಡದಲ್ಲಿ ಮಾಹಿತಿ ನೀಡಿ ಗಮನ ಸೆಳೆದರು.
ವೈಮಾನಿಕ ಪ್ರದರ್ಶನಕ್ಕೂ ಮುನ್ನ ಆಕಾಶದಲ್ಲಿ ಹಕ್ಕಿಗಳ ಹಾರಾಟ ಹೆಚ್ಚಾಗಿತ್ತು. ಹೀಗಾಗಿ ಪ್ರದರ್ಶನಕ್ಕೆ ಅಡ್ಡಿಯಾಗಬಾರದೆಂದು ಪೊಲೀಸ್ ಸಿಬ್ಬಂದಿ ಮೈದಾನದ ಸುತ್ತ ಪಟಾಕಿ ಸಿಡಿಸಿ ಹಕ್ಕಿಗಳನ್ನು ಓಡಿಸುವ ಪ್ರಯತ್ನ ಮಾಡಿದರು. ಪ್ರದರ್ಶನದ ಪೂರ್ವ ತಾಲೀಮಿನ ಬಗ್ಗೆ ಮಾಹಿತಿ ಇರದ ಕಾರಣ ಮೈದಾನಕ್ಕೆ ಹೆಚ್ಚು ಜನ ಬಂದಿರಲಿಲ್ಲ.
ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿ.ಪಂ. ಸಿಇಒ ಯುಕೇಶ್ ಕುಮಾರ್, ಎಂಡಿಎ ಆಯುಕ್ತ ರಕ್ಷಿತ್ ಇದ್ದರು.
ನಗರದಲ್ಲಿ ಮಂಗಳವಾರ ಭಾರತೀಯ ವಾಯುಪಡೆಯ ‘ಸೂರ್ಯಕಿರಣ್’ ತಂಡವು ವೈಮಾನಿಕ ಪ್ರದರ್ಶನದ ತಾಲೀಮು ನಡೆಸಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.