ADVERTISEMENT

ಮೈಸೂರು:14 ಕೆ.ಜಿ ಗಾಂಜಾ ವಶ; ಒಬ್ಬನ ಬಂಧನ

ಒಡಿಶಾದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 2:59 IST
Last Updated 8 ಸೆಪ್ಟೆಂಬರ್ 2025, 2:59 IST
ಮೈಸೂರಿನ ಎನ್‌.ಆರ್.ಪೊಲೀಸರು ವಶಕ್ಕೆ ಪಡೆದ ಗಾಂಜಾ ಮೂಟೆಗಳು 
ಮೈಸೂರಿನ ಎನ್‌.ಆರ್.ಪೊಲೀಸರು ವಶಕ್ಕೆ ಪಡೆದ ಗಾಂಜಾ ಮೂಟೆಗಳು    

ಮೈಸೂರು: ಬನ್ನಿಮಂಟಪದ ಮಣಿಪಾಲ್‌ ಆಸ್ಪತ್ರೆ ರಿಂಗ್‌ ರೋಡ್‌ ಜಂಕ್ಷನ್‌ನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಶ್ರೀನಿವಾಸ್‌ (54) ಅಲಿಯಾಸ್‌ ಗಾಂಜಾ ಶೀನಾ ಎಂಬುವರನ್ನು ಬಂಧಿಸಿರುವ ಎನ್‌.ಆರ್.ಠಾಣೆ ಪೊಲೀಸರು 14 ಕೆ.ಜಿ 150 ಗ್ರಾಂ ಗಾಂಜಾ ವಶಕ್ಕೆ ‍ಪಡೆದಿದ್ದಾರೆ. 

ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ 3.45ಕ್ಕೆ ಖಾಸಗಿ ವಾಹನದಲ್ಲಿ ಬರುತ್ತಿರುವ ಖಚಿತ ಮಾಹಿತಿ ದೊರೆತು ಕಾರ್ಯಾಚರಣೆ ನಡೆಸಲಾಗಿದೆ. ಗಾಂಜಾ ಬೆಲೆ ₹ 4.5 ಲಕ್ಷ ಆಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ‍‍ಪುಷ್ಪಪುರ ಗ್ರಾಮದವರಾಗಿದ್ದು, 2011ರಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ 4, ಮೈಸೂರಿನಲ್ಲಿ 6, ಚಾಮರಾಜನಗರದ ಬೇಗೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದ ಮದಗಲ್ಲು ಠಾಣೆಯ ತಲಾ 1 ಪ್ರಕಟಣ ಸೇರಿದಂತೆ 12 ‍ಪ್ರಕರಣ ದಾಖಲಾಗಿವೆ. 

ADVERTISEMENT

8 ಪ್ರಕರಣಗಳಲ್ಲಿ ಹಲವು ಬಾರಿ ಜಾಮೀನು ರಹಿತ ವಾರೆಂಟ್‌ ಅನ್ನು ನ್ಯಾಯಾಲಯ ಹೊರಡಿಸಿತ್ತು. ಒಡಿಶಾ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ಈತನ ಪುತ್ರರಾದ ಸುರೇಶ್‌ ಹಾಗೂ ನಂದೀಶ್‌ ವಿರುದ್ಧವೂ 4 ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ. 

ಶ್ರೀನಿವಾಸ್‌ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ‌ ಮಾಡಲಾಗಿತ್ತು. ಕಳೆದ 45 ದಿನದಿಂದ ತಂಡವು ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನ ವಿವಿಧೆಡೆ ಶೋಧ ನಡೆಸಿತ್ತು ಎಂದು ತಿಳಿಸಿದ್ದಾರೆ. 

ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿ ಮೊಹಮ್ಮದ್‌ ಷರೀಫ್‌ ರಾವುತರ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಶಬ್ಬೀರ್ ಹುಸೇನ್, ಪಿಎಸ್‌ಐ ಲೇಪಾಕ್ಷ, ಸಿಬ್ಬಂದಿ ರಾಮಸ್ವಾಮಿ, ಮಧುಕುಮಾರ್, ಪ್ರಕಾಶ್‌ ರಾಥೋಡ್‌ ಪಾಲ್ಗೊಂಡಿದ್ದರು. 

ಶ್ರೀನಿವಾಸ್‌ 

‘ಶೋಧ ಚುರುಕು’ ‘ನಗರದಲ್ಲಿ ಮಾದಕ‌ ದ್ರವ್ಯ ಪತ್ತೆ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ಆರೋಪಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ‍ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.