
ಮೈಸೂರು: ವಿಜಯನಗರ ಮೂರನೇ ಹಂತದಲ್ಲಿ ಒತ್ತುವರಿಯಾಗಿದ್ದ 7 ಎಕರೆ ಜಾಗವನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಶನಿವಾರ ವಶಕ್ಕೆ ಪಡೆಯಿತು. ಈ ಜಮೀನಿನ ಮೌಲ್ಯ ₹140 ಕೋಟಿ ಎಂದು ಅಂದಾಜಿಸಲಾಗಿದೆ.
ಬೆಳಗ್ಗೆ 5.30ಕ್ಕೆ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿ, ಸ್ಥಳದಲ್ಲಿದ್ದ ಶೆಡ್ ತೆರವುಗೊಳಿಸಿ, ಜಾಗದ ಸುತ್ತ ತಂತಿಬೇಲಿ ಹಾಕುವ ವೇಳೆ ಕೆಲವರು ಜೆಸಿಬಿ ಯಂತ್ರಗಳ ಮುಂದೆ ಮಲಗಿ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದರು. ಆಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಅವರನ್ನು ವಶಕ್ಕೆ ಪಡೆದು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.
ವಿಜಯನಗರ ಮೂರನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ 1984ರಲ್ಲಿ ಈ ಜಾಗದ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಮಾಲೀಕರಿಗೆ ನಿಯಮಾನುಸಾರ ಪರಿಹಾರ ಮಂಜೂರು ಮಾಡಿತ್ತು. ಆದರೆ ನಂತರ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಶೆಡ್ ನಿರ್ಮಿಸಿಕೊಂಡಿದ್ದರು.
‘ಆರ್ಟಿಸಿ ಪ್ರಕಾರ ಜಮೀನಿನ ಮಾಲೀಕತ್ವ ಪ್ರಾಧಿಕಾರದ ಹೆಸರಿನಲ್ಲಿದ್ದು, ಜಿಲ್ಲಾಧಿಕಾರಿ ನಿರ್ದೇಶನದಂತೆ ಅತಿಕ್ರಮಣ ತೆರವುಗೊಳಿಸಿದ್ದೇವೆ. ತಂತಿಬೇಲಿ ಅಳವಡಿಸುವ ಕಾಮಗಾರಿಯೂ ನಡೆದಿದೆ’ ಎಂದು ಎಂಡಿಎ ಆಯುಕ್ತ ರಕ್ಷಿತ್ ತಿಳಿಸಿದರು.
ಎಂಡಿಎ ಕಾರ್ಯದರ್ಶಿ ಕೆ.ಜಾನ್ಸನ್, ಕಾರ್ಯಪಾಲಕ ಎಂಜಿನಿಯರ್ಗಳಾದ ನಾಗೇಶ್, ಮಹೇಶ್, ಎಇಇ ಸುನಿತಾ, ಭೂಸ್ವೕಾಧೀನ ಶಾಖೆ ಸಿಬ್ಬಂದಿ ಸಚಿನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.