
ಮೈಸೂರು: ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದ ಸರ್ವೆ ನಂ 390ರಿಂದ 430ರವರೆಗಿನ ಜಮೀನಿನ ನೈಜ ಫಲಾನುಭವಿಗಳಿಗೆ ಪರಿಹಾರ ಪಾವತಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
‘ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯನ ಛತ್ರ ಹೋಬಳಿ, ಇಮ್ಮಾವು ಗ್ರಾಮಕ್ಕೆ ಸೇರಿದ ಸುಮಾರು 500 ಎಕರೆಗೂ ಹೆಚ್ಚು ಸರ್ಕಾರಿ ಜಮೀನಿನಲ್ಲಿ 70– 80 ವರ್ಷಗಳಿಂದ ಗೇಣಿದಾರರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದರು. ಆ ಜಮೀನನ್ನು ಸರ್ಕಾರ ಕೈಗಾರಿಕಾ ಉದ್ದೇಶಕ್ಕಾಗಿ 2008ರಲ್ಲಿ ಭೂಸ್ವಾಧೀನ ಪಡಿಸಿಕೊಂಡಿತು’ ಎಂದು ತಿಳಿಸಿದರು.
‘ಖಾತೆದಾರರಿಗೆ ಎಕರೆಗೆ ₹21 ಲಕ್ಷ ಪರಿಹಾರ ನಿಗದಿಪಡಿಸಿ ಪರಿಹಾರ ಪಾವತಿಸಿದ್ದಾರೆ. ಸರ್ಕಾರ ₹18 ಕೋಟಿ ಬಿಡುಗಡೆ ಮಾಡಿ ನಿಜವಾದ ಸಾಗುವಳಿದಾರರಿಗೆ ಪರಿಹಾರ ಪಾವತಿಸದೆ ಬೇರೆಯವರಿಗೆ ಪರಿಹಾರದ ಹಣ ನೀಡಿದೆ’ ಎಂದು ಆರೋಪಿಸಿದರು.
‘ಈ ಬಗ್ಗೆ ಡಿಸಿ ಕಚೇರಿ ಮುಂದೆ ಎರಡು ಬಾರಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ನ್ಯಾಯ ಸಿಕ್ಕಿಲ್ಲ. ಮೈಸೂರಿನ ಕೆಐಡಿಬಿ ಕಚೇರಿ ಮುಂದೆ ಫೆ.2ರಂದು ಅನಿರ್ದಿಷ್ಟಾವಧಿ ಚಳುವಳಿ ಪ್ರಾರಂಭಿಸಿದ್ದೇವು. 15 ದಿನದೊಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ ಬಳಿಕ ಚಳವಳಿ ವಾಪಸ್ ಪಡೆಯಲಾಗಿತ್ತು. ಆದರೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ, ತನಿಖೆ ಮಾಡದೆ, ವರದಿ ನೀಡದ ಕಾರಣ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಲಾದರೂ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ’ ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಪಾತ್ರೆ, ತರಕಾರಿ ತಂದಿದ್ದ ಪ್ರತಿಭಟನಾಕಾರರು ಸ್ಥಳದಲ್ಲೇ ಬಿಡಾರ ಹೂಡಿದರು. ಎಲ್ಲರೂ ಸೇರಿ ಆಹಾರ ತಯಾರಿಸಿ, ಸೇವಿಸಿದರು. ಅಧಿಕಾರಿಗಳ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಅಧ್ಯಕ್ಷ ಹೂಸೂರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಹೊಸಕೋಟೆ ಬಸವರಾಜು ಭಾಗವಹಿಸಿದ್ದರು.
ನಿಜವಾದ ಸಾಗುವಳಿದಾರರಿಗೆ ಪರಿಹಾರ ಪಾವತಿಸಿಲ್ಲ ಅಧಿಕಾರಿಗಳ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.