ADVERTISEMENT

ಮೈಸೂರು: ಕಾರಾಗೃಹದಲ್ಲಿ 9 ಮೊಬೈಲ್‌ ಪತ್ತೆ

ಐಜಿಪಿ ಅಲೋಕ್‌ ಕುಮಾರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 5:44 IST
Last Updated 18 ಡಿಸೆಂಬರ್ 2025, 5:44 IST
ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಐಜಿಪಿ ಅಲೋಕ್‌ ಕುಮಾರ್‌ ಅವರನ್ನು ವಿ.ಶೇಷುಮೂರ್ತಿ ಸ್ವಾಗತಿಸಿದರು
ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಐಜಿಪಿ ಅಲೋಕ್‌ ಕುಮಾರ್‌ ಅವರನ್ನು ವಿ.ಶೇಷುಮೂರ್ತಿ ಸ್ವಾಗತಿಸಿದರು   

ಮೈಸೂರು: ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ.ಶೇಷುಮೂರ್ತಿ ನೇತೃತ್ವದಲ್ಲಿ ಮಂಗಳವಾರ ರಾತ್ರಿ ನಡೆಸಿದ ತಪಾಸಣೆಯಲ್ಲಿ 9 ಮೊಬೈಲ್‌ ಫೋನ್‌, 11 ಸಿಮ್‌ ಕಾರ್ಡ್‌, 2 ಚಾರ್ಜರ್‌, 1 ಚಾರ್ಜಿಂಗ್‌ ಕೇಬಲ್‌ ಪತ್ತೆಯಾಗಿದೆ. ಇವನ್ನು ಮಂಡಿ ಠಾಣೆ ವಶಕ್ಕೆ ನೀಡಿ, ಪ್ರಕರಣ ದಾಖಲಿಸಲಾಯಿತು.

ಕಾರಾಗೃಹಕ್ಕೆ ಬುಧವಾರ ಬೆಳಿಗ್ಗೆ ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಐಜಿಪಿ ಅಲೋಕ್‌ ಕುಮಾರ್‌ ದಿಢೀರ್‌ ಭೇಟಿ ನೀಡಿದರು. ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಯ ಕರ್ತವ್ಯ ಪ್ರಶಂಸಿಸಿ ₹30 ಸಾವಿರ ಬಹುಮಾನ ಘೋಷಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಎಲ್ಲಾ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಮೈಸೂರಿನಲ್ಲಿ ಎರಡು ಗಂಟೆ ತಪಾಸಣೆ ನಡೆಸಲಾಯಿತು. ಕೈದಿಗಳ ಹಾಗೂ ಇಲ್ಲಿನ ಸಿಬ್ಬಂದಿ ಸಮಸ್ಯೆಗಳ ಅಹವಾಲು ಸ್ವೀಕರಿಸಲಾಗಿದೆ. ಡಿಸಿಪಿಗಳಾದ ಆರ್‌.ಎನ್‌.ಬಿಂದುಮಣಿ ಹಾಗೂ ಕೆ.ಎಸ್‌.ಸುಂದರ್‌ ರಾಜ್‌ ನೇತೃತ್ವದಲ್ಲೂ ತಪಾಸಣೆ ನಡೆಯುತ್ತಿವೆ. ಈಚೆಗೆ ಕೈದಿಗಳನ್ನು ನೋಡಲು ಬಂದವರನ್ನು ತಪಾಸಣೆ ಮಾಡಿದಾಗ ಗಾಂಜಾ ಪತ್ತೆಯಾಗಿದ್ದು, ಈ ಜಾಲಕ್ಕೆ ಕಡಿವಾಣ ಹಾಕಲು ಕ್ರಮವಹಿಸುತ್ತೇವೆ’ ಎಂದರು.

ADVERTISEMENT

‘ಕೆಲವು ಕಡೆಗಳಿಂದ ಗಾಂಜಾ ಎಸೆಯುತ್ತಾರೆ ಎಂಬ ದೂರುಗಳಿವೆ. ಹೀಗಾಗಿ ಮೈಸೂರು, ಬೆಂಗಳೂರು, ಬೆಳಗಾವಿ, ಕಲಬುರಗಿಯಲ್ಲಿ ಎಐ ಆಧಾರಿತ ತಂತ್ರಜ್ಞಾನ ಅಳವಡಿಸಲಾಗುವುದು. ತಜ್ಞರು ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ. ಮುಖ್ಯದ್ವಾರದಿಂದ ನಿಷೇಧಿತ ವಸ್ತು ಹೋಗದಂತೆ ತಡೆಯಲು ಸೂಚಿಸಲಾಗಿದೆ. ಸಿಬ್ಬಂದಿ ಕೊರತೆಯಿದ್ದು, ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಯವರೆಗೆ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಪರಿಣಾಮಕಾರಿ ಬದಲಾವಣೆಗೆ ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.