ADVERTISEMENT

ರಂಗಭೂಮಿ ಉಳಿಸಿದವರನ್ನು ಸ್ಮರಿಸಿ: ಪ್ರೊ.ಯು.ಎ.ಶರತ್ ಅನಂತಮೂರ್ತಿ

ಸಹನಾ ಪಿಂಜಾರ ಅವರಿಗೆ ‘ರಂಗ ರತ್ನ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:56 IST
Last Updated 13 ಡಿಸೆಂಬರ್ 2025, 5:56 IST
ಮೈಸೂರಿನಲ್ಲಿ ಶುಕ್ರವಾರ ಹೊಸಪೇಟೆಯ ರಂಗಕರ್ಮಿ ಸಹನಾ ಪಿಂಜಾರ ಅವರಿಗೆ 2025ರ ‘ರಂಗ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿತಾ, ರತ್ನ ವಿಶ್ವನಾಥ್ ಮಿರ್ಲೆ, ಪ್ರೊ.ರಾಮೇಶ್ವರಿ ವರ್ಮ, ಆನಂದ್ ಬಾಬು, ಪ್ರೊ.ಯು.ಎ. ಶರತ್ ಅನಂತಮೂರ್ತಿ, ಅವನಿ, ಮಲ್ಲಿಕಾರ್ಜುನ್‌ ಪಾಲ್ಗೊಂಡಿದ್ದರು.
ಮೈಸೂರಿನಲ್ಲಿ ಶುಕ್ರವಾರ ಹೊಸಪೇಟೆಯ ರಂಗಕರ್ಮಿ ಸಹನಾ ಪಿಂಜಾರ ಅವರಿಗೆ 2025ರ ‘ರಂಗ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿತಾ, ರತ್ನ ವಿಶ್ವನಾಥ್ ಮಿರ್ಲೆ, ಪ್ರೊ.ರಾಮೇಶ್ವರಿ ವರ್ಮ, ಆನಂದ್ ಬಾಬು, ಪ್ರೊ.ಯು.ಎ. ಶರತ್ ಅನಂತಮೂರ್ತಿ, ಅವನಿ, ಮಲ್ಲಿಕಾರ್ಜುನ್‌ ಪಾಲ್ಗೊಂಡಿದ್ದರು.   

ಮೈಸೂರು: ‘ಮೈಸೂರಿನಲ್ಲಿ ರಂಗಭೂಮಿ ಉಳಿಯಲು ಕಾರಣರಾದ ರಂಗಕರ್ಮಿಗಳನ್ನು ನೆನಪಿಸಿಕೊಳ್ಳಬೇಕು’ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಯು.ಎ.ಶರತ್ ಅನಂತಮೂರ್ತಿ ಹೇಳಿದರು.

ಕೆನಡಾದ ಬೆಲ್ಲಿ ಧ್ಯಾನ ಮಾಸ್ಟರ್‌ ತರ್ನೀವ್‌ ಮತ್ತು ಎಂಜಿನಿಯರ್‌ ಎನ್‌.ಎಸ್‌.ಆನಂದ್‌ ಅವರು ಸ್ಥಾಪಿಸಿರುವ  ‘ರಂಗ ರತ್ನ’ ಪ್ರಶಸ್ತಿಯನ್ನು ಹೊಸಪೇಟೆಯ ರಂಗಕರ್ಮಿ ಸಹನಾ ಪಿಂಜಾರ ಅವರಿಗೆ ಶುಕ್ರವಾರ ಪ್ರದಾನ ಮಾಡಿ ಮಾತನಾಡಿದರು. ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.

‘ಮೈಸೂರಿನಲ್ಲಿ ರಂಗಭೂಮಿ ಉಳಿಯುವಲ್ಲಿ ನ.ರತ್ನ ಅವರ ಪಾತ್ರವೂ ದೊಡ್ಡದಿದೆ. ಹವ್ಯಾಸಿ ರಂಗಕರ್ಮಿಗಳ ‘ಸಮತೆಂತೋ’ ತಂಡದ ಕೊಡುಗೆಯೂ ಮಹತ್ವದ್ದು. ರಂಗಕರ್ಮಿಗಳ ಸಹವಾಸದಿಂದಲೇ ನಮ್ಮೆಲ್ಲರ ಜಗತ್ತು ವಿಸ್ತಾರವಾಯಿತು’ ಎಂದು ಪ್ರೊ.ಶರತ್‌ ಹೇಳಿದರು.

ADVERTISEMENT

‘ಇಂದು ಬುದ್ಧಿಜೀವಿ ಎಂದರೆ ಕೆಟ್ಟ ಅರ್ಥ ಬರುವ ಸನ್ನಿವೇಶವಿದೆ. ಅದಕ್ಕೆ ಒಳ್ಳೆಯ ಅರ್ಥವನ್ನು ತಂದುಕೊಡುವಲ್ಲಿ ನ.ರತ್ನ, ವಿಶ್ವನಾಥ್ ಮಿರ್ಲೆ, ಯು.ಆರ್. ಅನಂತಮೂರ್ತಿ, ರಾಮೇಶ್ವರಿ ವರ್ಮ ಅವರ ಬದುಕು ಮಾದರಿಯಾಗಿದೆ’ ಎಂದು ಆಶಿಸಿದರು.

‘ನ.ರತ್ನ ಅವರು ಜಾಣ ಶಿಶುಗಳ ಪರವಾಗಿರಲಿಲ್ಲ, ಎಲ್ಲರಲ್ಲೂ ಪ್ರತಿಭೆಯನ್ನು ಗುರುತಿಸುವ ಕಣ್ಣು ಅವರಿಗಿತ್ತು. ಇಂದಿನ ಆಡಂಬರದ ಜೀವನದಲ್ಲಿ ಸತ್ಯದ ಕಡೆ ನೋಡಲು ಸರಳತೆ ಬೇಕು ಎನ್ನುವುದನ್ನು ಅವರು ತೋರಿಸಿಕೊಟ್ಟರು’ ಎಂದರು. 

ಇದೇ ಸಂದರ್ಭದಲ್ಲಿ ನ.ರತ್ನ ಅವರ ‘ಅಯಾನ್ ಶಾಂತಿ ಕುಟೀರ’ ನಾಟಕದ ಇಂಗ್ಲಿಷ್ ಅನುವಾದ ಕೃತಿಯನ್ನು ಬಿಡುಗಡೆ ಮಾಡಿದ ರಂಗಕರ್ಮಿ ರಾಮೇಶ್ವರಿ ವರ್ಮ, ‘ಹಿರಿಯ ನಾಗರಿಕರಿಗೆ ನಾಟಕವೇ ಇಲ್ಲ ಎಂದು ನ.ರತ್ನ ಅವರಲ್ಲಿ ಪ್ರಸ್ತಾಪಿಸಿದಾಗ ಅವರು ಈ ನಾಟಕವವನ್ನು ರಚಿಸಿ ಅಭಿನಯಿಸಿದ್ದರು. ನಾನೂ ಅಭಿನಯಿಸಿದ್ದೆ’ ಎಂದು ಸ್ಮರಿಸಿದರು.

ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ರತ್ನ ಅವರ ಮಗ ಅಜಿತ್, ತಮ್ಮ ತಂದೆಯ ಹೆಸರನ್ನು ಉಳಿಸಿದ್ದಾರೆ. ಇಂಥ ಪ್ರಯತ್ನ ಈಗ ಅತ್ಯಗತ್ಯ’ ಎಂದರು. 

ಪ್ರಶಸ್ತಿ ಸ್ವೀಕರಿಸಿ ಭಾವುಕರಾದ ಸಹನಾ ಅವರು, ‘ನ.ರತ್ನ ಅವರ ನಾಟಕಗಳನ್ನು ಓದಿ ಬೆಳೆದಿದ್ದ ನನಗೆ ಅವರ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. 60 ದಶಕದಲ್ಲಿ ನ.ರತ್ನ ಅವರು ಬರೆದ ಪುಸ್ತಕಗಳು ಪ್ರಸ್ತುತವಾಗಿವೆ. ನ.ರತ್ನ ಅವರು ಇಲ್ಲದಿದ್ದರೆ ಪಾಶ್ಚಾತ್ಯ ಮಾಧ್ಯಮಗಳಿಗಷ್ಟೇ ಸೀಮಿತವಾಗಿದ್ದ ಅಸಂಗತ ನಾಟಕಗಳನ್ನು ನೋಡಲು, ಕೇಳಲು ಆಗುತ್ತಿರಲಿಲ್ಲ’ ಎಂದು ಹೇಳಿದರು. 

ರತ್ನ ವಿಶ್ವನಾಥ್ ಮಿರ್ಲೆ, ಅಜಿತ್ ರತ್ನ, ಆನಂದ್ ಬಾಬು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.