ADVERTISEMENT

ಸಕ್ಕರೆ ಕಾರ್ಖಾನೆಗೆ ಬಿಡ್‌ ಮಾಡಿ: ಡಿಕೆಶಿಗೆ ನಿರಾಣಿ ಸವಾಲು

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 13:11 IST
Last Updated 9 ಜೂನ್ 2020, 13:11 IST
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ   

ಮೈಸೂರು: ‘ಡಿ.ಕೆ.ಶಿವಕುಮಾರ್ ಶ್ರೀಮಂತ ವ್ಯಕ್ತಿಯಾಗಿದ್ದು, ನುರಿತ ರಾಜಕಾರಣಿಯೂ ಹೌದು. ಅವರ ನೇತೃತ್ವದಲ್ಲಿ ಬೇರೆ ಬೇರೆ ಕಾರ್ಖಾನೆಗಳಿವೆ. ಸಕ್ಕರೆ ಕಾರ್ಖಾನೆಗೂ ಅವರು ಬಿಡ್‌ ಮಾಡಲಿ. ಯಾರು ಹೆಚ್ಚು ಬಿಡ್‌ ಸಲ್ಲಿಸುವರೋ ಅವರಿಗೆ ಗುತ್ತಿಗೆಗೆ ಕೊಡಲಿ’ ಎಂದು ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಮಂಗಳವಾರ ಇಲ್ಲಿ ಸವಾಲು ಹಾಕಿದರು.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಿಎಸ್‌ಎಸ್‌ಕೆ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ಬೇರೆಯವರಲ್ಲ. ನನ್ನ ಸ್ನೇಹಿತರೇ ಆಗಿದ್ದಾರೆ. ಪಕ್ಷ ಬೇರೆ ಬೇರೆ ಇರಬಹುದು. ನಾನು ಬಿಜೆಪಿಯಲ್ಲಿದ್ದಾನೆ ಎಂಬ ಕಾರಣಕ್ಕೆ ವಿರೋಧ ಮಾಡುವುದು ಬೇಡ’ ಎಂದರು.

‘ಕೇವಲ ಸಕ್ಕರೆ ಕಾರ್ಖಾನೆಗಳಷ್ಟೇ ಅಲ್ಲ, ರಾಜ್ಯದ ಎಲ್ಲ ಕಾರ್ಖಾನೆಗಳೂ ಖಾಸಗೀಕರಣ ಆಗಲಿ. ಒಬ್ಬ ಉದ್ಯಮಿಯಾಗಿ ಈ ರೀತಿ ಒತ್ತಾಯಿಸುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

‘ಸರ್ಕಾರ ಇರುವುದು ಕಾರ್ಖಾನೆಗಳನ್ನು ನಡೆಸಲು ಅಲ್ಲ. ಖಾಸಗಿಯವರಿಗೆ ಕೊಟ್ಟರೆ ಅವರು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಾರೆ. ಕಾರ್ಖಾನೆಗಳನ್ನು ಮಾರಾಟ ಮಾಡುವುದಕ್ಕೆ ನನ್ನ ವಿರೋಧವಿದೆ. ಗುತ್ತಿಗೆ ಆಧಾರದಲ್ಲಿ ನೀಡಲಿ. ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದರೆ ಸರ್ಕಾರ ಗುತ್ತಿಗೆ ರದ್ದುಗೊಳಿಸಲಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.