
ಹುಣಸೂರು: ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಪಂಚಾಯಿತಿ ಹಂತದಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿ ಮತ್ತು ಫಲಾನುಭವಿಗಳಿಂದ ಮಾಹಿತಿ ಸಂಗ್ರಹಿಸಲು ಗುಜರಾತ್ ರಾಜ್ಯದ ಸಹಾಯಕ ಯೋಜನಾ ತಾಂತ್ರಿಕ ನಿರ್ದೇಶಕರ ನರೇಗಾ ತಂಡ ತಾಲ್ಲೂಕಿನ ಬಿಳಿಕೆರೆ ಮತ್ತು ಬನ್ನಿಕುಪ್ಪೆ ಪಂಚಾಯಿತಿಗೆ ಭೇಟಿ ಮಾಹಿತಿ ಸಂಗ್ರಹಿಸಿತು.
ಮೈಸೂರಿನ ಎಸ್.ಐ.ಆರ್.ಡಿ ಕೇಂದ್ರದಲ್ಲಿ ಮೂರು ದಿನದ ತರಬೇತಿಗೆ ಭೇಟಿ ನೀಡಿದ್ದ ತಂಡ ಬುಧವಾರ ಬಿಳಿಕೆರೆ ಪಂಚಾಯಿತಿಗೆ ಭೇಟಿ ನೀಡಿ ಸ್ಥಳೀಯ ಆಡಳಿತ ಮತ್ತು ಪಂಚಾಯತ್ ರಾಜ್ ಹಮ್ಮಿಕೊಂಡ ಯೋಜನೆಗಳ ಅನುಷ್ಠಾನ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿತು. ಬಳಿಕ ಅಮೃತ್ ಸರೋವರ ಯೋಜನೆಯಲ್ಲಿ ಅಭಿವೃದ್ಧಿಪಡಿಸಿದ ಪಟ್ಟಲ್ಲದಮ್ಮ ಕೆರೆಗೆ ಭೇಟಿ ನೀಡಿದರು. ನರೇಗಾ ಯೋಜನೆಯಲ್ಲಿ ಕೂಲಿ ಕೆಲಸಕ್ಕೆ ನೋಂದಣಿ ಮಾಡಿಕೊಂಡ ಮಹಿಳೆಯರು ತಮ್ಮ ಕೂಸನ್ನು ಸುರಕ್ಷಿತವಾಗಿ ಪಾಲನೆ ಮಾಡುವ ದೃಷ್ಟಿಯಿಂದ ಸರ್ಕಾರ ಜಾರಿಗೊಳಿಸಿದ ಕೂಸಿನ ಮನೆಗೆ ಭೇಟಿ ನೀಡಿ ನಿರ್ವಹಣೆ ಕುರಿತು ಮಾಹಿತಿ ಸಂಗ್ರಹಿಸಿದರು.
ಬನ್ನಿಕುಪ್ಪೆ ಪಂಚಾಯಿತಿಗೆ ಭೇಟಿ ನೀಡಿದ ತಂಡ ತೋಟಗಾರಿಕೆ ಬೇಸಾಯಕ್ಕೆ ನರೇಗಾ ಯೋಜನೆ ಸಮರ್ಪಕವಾಗಿ ಬಳಸಿಕೊಂಡ ಪ್ರಗತಿಪರ ರೈತ ಮೂರ್ತಿ ಅವರೊಂದಿಗೆ ಸಂವಾದ ನಡೆಸಿ ಯೋಜನೆಗೆ ಸಂಬಂಧಿಸಿದ ಮಾಹಿತಿ ಪಡೆದರು. ಬಳಿಕ ಜೀರ್ಣೋದ್ಧಾರಗೊಂಡ ದನದಕಟ್ಟೆ ಕೆರೆಗೆ ಭೇಟಿ ನೀಡಿ ಕೆರೆಗೆ ನೀರು ಸಂಗ್ರಹಿಸಿದ ಮಾದರಿ ಕುರಿತು ಮಾಹಿತಿ ಸಂಗ್ರಹಿಸಿದರು.
ಮೈಸೂರು ಎಸ್.ಐ.ಆರ್.ಡಿ ಕೇಂದ್ರದ ವಿಜಯಕುಮಾರ್ ನೇತೃತ್ವದಲ್ಲಿ 30 ಪ್ರಶಿಕ್ಷಣಾರ್ಥಿಗಳಿದ್ದ ತಂಡ ಸದಸ್ಯರು ಭೇಟಿ ನೀಡಿದ್ದರು. ಭೇಟಿ ಸಮಯದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ, ರಾಜೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದ ನಾಯಕ, ಅರವಿಂದ, ಪಿಡಿಒ ರಾಘವೇಂದ್ರ,ನಿತಿನ್, ಪ್ರಸನ್ನ ಇದ್ದರು.