
ಮೈಸೂರು: ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಂಜನಗೂಡು ತಾಲ್ಲೂಕು ಕುಪ್ಪರವಳ್ಳಿ ಪ್ರೌಢಶಾಲೆಯು ದಕ್ಷಿಣಭಾರತ ಮಟ್ಟಕ್ಕೆ ಆಯ್ಕೆಯಾಗಿದೆ.
ತುಮಕೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ತುಮಕೂರಿನ ಕನ್ನಡಭವನದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಪ್ರೌಢಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ವಿಜ್ಞಾನ ನಾಟಕ ‘ಕತ್ತೆ ಕಿವಿ’ ದ್ವಿತೀಯ ಸ್ಥಾನ, ಉತ್ತಮ ನಟಿ, ಉತ್ತಮ ನಾಟಕ ರಚನೆ ಬಹುಮಾನ ಗಳಿಸುವ ಮೂಲಕ ಆಯ್ಕೆಯಾಗಿದೆ.
ನಾಟಕದಲ್ಲಿ ಫ್ರಾಗೇಶ ಪಾತ್ರದಲ್ಲಿ ನಟಿಸಿದ 9ನೇ ತರಗತಿಯ ರಕ್ಷಾ ಉತ್ತಮ ನಟಿ ಬಹುಮಾನ ಪಡೆದರು. ಶಾಲೆಯ ನಾಟಕ ಶಿಕ್ಷಕ ಸಂತೋಷ ಗುಡ್ಡಿಯಂಗಡಿ ಉತ್ತಮ ನಾಟಕ ರಚನಾಕಾರ ಬಹುಮಾನಕ್ಕೆ ಪಾತ್ರವಾದರು.
‘ಕೆರೆಗಳಲ್ಲಿ ಬೆಳೆಯುವ ಕತ್ತೆ ಕಿವಿ (ವಾಟರ್ ಹಯಾಸಿಂತ್) ಎನ್ನುವ ಕಳೆಸಸ್ಯದಿಂದ ಆಗುವ ತೊಂದರೆ ಮತ್ತು ಆ ಕಳೆಸಸ್ಯವನ್ನು ಯೋಜನಾಬದ್ಧವಾಗಿ ಬಳಸಿದರೆ ಆಗುವ ಪರಿಸರ ಸ್ನೇಹಿ ಜೈವಿಕ ಇಂಧನದ ಕುರಿತ ಈ ನಾಟಕವು ಮೈಸೂರಿನ ದಳವಾಯಿ ಕೆರೆಯನ್ನು ಕೇಂದ್ರವಾಗಿರಿಸಿಕೊಂಡು ಸಾಗುತ್ತದೆ. ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆಯ ತಂಡವೊಂದು ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಯಾಗಿದೆ’ ಎಂದು ನಾಟಕ ಶಿಕ್ಷಕ ಸಂತೋಷ ಗುಡ್ಡಿಯಂಗಡಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಾದ ಎನ್.ಎಸ್.ರನ್ಯಾ, ಸಿ.ಪುಷ್ಪಾ, ನಿಸರ್ಗಾ, ಝಾನ್ಸಿ, ಎನ್.ಜಿ.ಕೀರ್ತನ, ವಿ.ಎನ್.ಭರತ್, ಬಿ.ಎಂ.ಮನುನಾಯಕ ನಾಟಕದಲ್ಲಿ ಅಭಿನಯಿಸಿದ್ದರು. ಮೇಲ್ವಿಚಾರಕರಾಗಿ ಶಿಕ್ಷಕರಾದ ಡಿ.ಪಿ. ಜಯಣ್ಣ, ಜುಮುನಾ ವೈ ತಂಡದೊಂದಿಗೆ ಇದ್ದರು. ವಿದ್ಯಾರ್ಥಿಗಳನ್ನು ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಕೆ.ಕೆ.ಪ್ರಕಾಶ್, ಶಿಕ್ಷಕರಾದ ದೀಪು, ಡಿ.ಡಿ.ರೂಪ, ಪುಟ್ಟಸ್ವಾಮಿ ಬಿ.ಎಸ್, ಹರೀಶ್ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.