ಮೈಸೂರು: ‘ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ’ ಎಂದು ಬೆಂಗಳೂರು ಸಂಚಾರ ಪೊಲೀಸರಿಗೆ ಸವಾಲೆಸೆದಿದ್ದ ರಘು ಎಂಬಾತನನ್ನು, ಬೆಂಗಳೂರು ಸಂಚಾರ ಪೊಲೀಸರು ಸ್ಥಳೀಯ ಪೊಲೀಸರ ನೆರವಿನಿಂದ ಬಂಧಿಸಿದ್ದಾರೆ.
ಹುಣಸೂರು ತಾಲ್ಲೂಕಿನ ಮಾಚಬಾಯನಹಳ್ಳಿ ನಿವಾಸಿಯಾದ ರಘು ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ. ತನ್ನ ಬಳಿ ವಾಹನದ ಯಾವುದೇ ದಾಖಲೆಗಳು ಇಲ್ಲ. ಬೇಕಿದ್ದರೆ ಬೆಂಗಳೂರು ಸಂಚಾರ ಪೊಲೀಸರು ತನ್ನನ್ನು ಹಿಡಿಯುವ ಧೈರ್ಯ ತೋರಲಿ ಎಂದು ಮಾತನಾಡಿ, ಆ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ. ಇದು ವೈರಲ್ ಆಗಿತ್ತು.
ಬೆಂಗಳೂರು ನಗರ ಪೊಲೀಸರು ಆತನ ವಾಹನದ ಸಂಖ್ಯೆಯ ಆಧಾರದ ಮೇಲೆ ಇಲ್ಲಿನ ಎನ್.ಆರ್. ಸಂಚಾರ ಠಾಣೆ ಹಾಗೂ ಮಂಡಿ ಠಾಣೆ ಪೊಲೀಸರ ನೆರವಿನೊಂದಿಗೆ ಈತನನ್ನು ರೈಲು ನಿಲ್ದಾಣದ ಬಳಿ ಮಂಗಳವಾರ ಬಂಧಿಸಿದ್ದಾರೆ. ಈತನಿಂದ ₹ 1,200 ದಂಡ ವಸೂಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.