ADVERTISEMENT

ಮಲಿನಗೊಂಡ ಕೆರೆ, ನಮಗೆ ಫಿಲ್ಟರ್‌ ನೀರೆ ಗತಿ!

ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ‘ವಾಕ್‌ವಿತ್‌ಇನ್‌‘ ತಂಡಕ್ಕೆ ಬೆಳವಾಡಿ ಗ್ರಾಮಸ್ಥರ ಪ್ರತಿಕ್ರಿಯೆ

ರಮೇಶ ಕೆ
Published 23 ಡಿಸೆಂಬರ್ 2019, 19:30 IST
Last Updated 23 ಡಿಸೆಂಬರ್ 2019, 19:30 IST
ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನೀರು ಪೋಲಾಗುತ್ತಿರುವುದನ್ನು ಡಾ.ಆರ್‌.ಬಾಲಸುಬ್ರಹ್ಮಣ್ಯಂ ಗಮನಿಸಿದರು
ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನೀರು ಪೋಲಾಗುತ್ತಿರುವುದನ್ನು ಡಾ.ಆರ್‌.ಬಾಲಸುಬ್ರಹ್ಮಣ್ಯಂ ಗಮನಿಸಿದರು   

ಮೈಸೂರು: ‘ಗ್ರಾಮದ ಚರಂಡಿ ಕಲ್ಮಶ ಕೆರೆ ಒಡಲು ಸೇರಿ ಹಸಿರು ಬಣ್ಣಕ್ಕೆ ತಿರುಗಿದೆ. ಪಂಚಾಯಿತಿಯಿಂದ ಮೂರು ದಿನಗಳಿಗೊಮ್ಮೆ ಬಿಡುವ ನೀರೂ ಕುಡಿಯಲು ಯೋಗ್ಯವಿಲ್ಲ. ಖಾಸಗಿಯವರ ನೀರಿನ ಘಟಕಗಳೇ ಕುಡಿಯಲು ಗತಿ...’

ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ (ಎಸ್‌ವಿವೈಎಂ) ಹಾಗೂ ‘ಗ್ರಾಮ್‌’ ಸಂಸ್ಥೆ ಆಯೋಜಿಸಿದ್ದ‘ನನ್ನೊಳಗಿನ ನಡಿಗೆ’ (ವಾಕ್‌ ವಿತ್ಇನ್‌) ಕಾರ್ಯಕ್ರಮದ ಮೊದಲ ದಿನಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದ ಬಹುತೇಕ ಮಹಿಳೆಯರಿಂದ ಕೇಳಿಬಂದ ಮಾತುಗಳಿವು.

ನೀರು ಮತ್ತು ನೈರ್ಮಲ್ಯದ ಬಗ್ಗೆ ವಾಸ್ತವ ಅರಿಯಲುಎಸ್‌ವಿವೈಎಂ ಸಂಸ್ಥಾಪಕ ಡಾ. ಆರ್‌. ಬಾಲಸುಬ್ರಹ್ಮಣ್ಯಂ ನೇತೃತ್ವದ ತಂಡ ಬೆಳವಾಡಿ ಗ್ರಾಮದಲ್ಲಿ ಒಂದು ಸುತ್ತು ಹಾಕಿತು.

ADVERTISEMENT

ಗ್ರಾಮ ಪಂಚಾಯಿತಿಯಿಂದ ಮೂರು ದಿನಗಳಿಗೊಮ್ಮೆ ಬೆಳಿಗ್ಗೆ 5ರಿಂದ 7ರವರೆಗೆ ನೀರು ಬಿಡುತ್ತಾರೆ. ಅದಕ್ಕಾಗಿ ಚಾತಕ ‍ಪಕ್ಷಿಯಂತೆ ಕಾಯಬೇಕು, ಈ ನೀರು ಸಹಾ ಮಲಿನವಾಗಿರುತ್ತದೆ. ಹಸಿರುಗಟ್ಟಿದ ಕೆರೆ ಪಕ್ಕದಲ್ಲೇ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಎಂಬುದು ಬೆಳವಾಡಿ ಸ್ಥಳೀಯರ ಆರೋಪವಾಗಿತ್ತು.

‘ರಸ್ತೆ ಡಾಂಬರೀಕರಣಗೊಂಡಿಲ್ಲ. ಚರಂಡಿ ಸ್ವಚ್ಛಗೊಳಿಸಿಲ್ಲ. ಯಾರೇ ಜನಪ್ರತಿನಿಧಿಗಳು ಬಂದರೂ ಗ್ರಾಮದ ಸಮಸ್ಯೆ ಬಗ್ಗೆ ಕೇಳುತ್ತೇವೆ. ಕುಡಿಯುವ ನೀರಿಗಾಗಿ ಬಹುತೇಕ ಎಲ್ಲರೂ ಖಾಸಗಿ ಶುದ್ಧ ನೀರಿನ ಘಟಕಗಳನ್ನೇ ಅವಲಂಭಿಸಿದ್ದೇವೆ. ₹ 5 ಕ್ಕೆ 20 ಲೀಟರ್‌ ಫಿಲ್ಟರ್‌ ನೀರು ಬರುತ್ತದೆ’ ಎಂದು ಹೇಳುತ್ತಾ ಕೋಳಿಗೆ ಕಾಳು ಹಾಕಿದರು ಕಮಲಮ್ಮ.

‘ಗ್ರಾಮೀಣ ಪ್ರದೇಶಗಳು ನಗರದೊಂದಿಗೆ ವಿಲೀನಗೊಂಡು ಹಾಗೂಕೈಗಾರಿಕೀಕರಣದಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಿವೆ ಎಂಬುದು ಅರಿವಾಯಿತು. ಇಲ್ಲಿನ ಹಾಗೂ ನಗರದ ಶಾಲೆಗಳನ್ನು ಗಮನಿಸಿದರೆ ಅಭಿವೃದ್ಧಿಯಲ್ಲಿನ ಅಸಮಾನತೆ ಗೊತ್ತಾಗುತ್ತದೆ’ ಎಂದುಆರ್‌. ಬಾಲಸುಬ್ರಹ್ಮಣ್ಯಂ ಅವರು ಸದಸ್ಯರಿಗೆ ತಿಳಿಸಿದರು.

ಬೆಳವಾಡಿ ಗ್ರಾಮದಲ್ಲಿ ಪಂಚಾಯಿತಿ ಹಾಗೂಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಾ ಒಂದು ಕುಡಿಯುವ ನೀರಿನ ಘಟಕಗಳಿದ್ದರೆ. ಖಾಸಗಿಯವರ ನಾಲ್ಕು ಘಟಕಗಳಿವೆ. ಬಹುತೇಕ ಎಲ್ಲಾ ಮನೆಗಳ ಮುಂದೆ ಡ್ರಮ್‌, ಸಿಮೆಂಟ್‌ ತೊಟ್ಟಿ ಹಾಗೂ ಬಕೆಟ್‌ಗಳಲ್ಲಿ ನೀರುಸಂಗ್ರಹಿಸಿರುವುದು ಕಂಡು ಬಂತು.

‘ಕೆರೆ ನೀರು ಮಲಿನಗೊಂಡು ಹಸಿರು ಬಣ್ಣಕ್ಕೆ ತಿರುಗಿರುವುದಲ್ಲದೇ ವಾಸನೆಯೂ ಬರುತ್ತಿದೆ. ಕೆರೆ ಪಕ್ಕದಲ್ಲೇ ಕೊರೆಸಿರುವ ಕೊಳವೆ ಬಾವಿಗಳ ನೀರನ್ನೇ ನಾವು ಕುಡಿಯಬೇಕಾ’ ಎಂದು ಪ್ರಶ್ನಿಸುತ್ತಾರೆ ಬೋರೇಗೌಡ.

ಬಾಲಸುಬ್ರಹ್ಮಣ್ಯಂ ಅವರು, ನೀರು ಪೋಲು ಮಾಡುತ್ತಿದ್ದ ಜಾಗದಲ್ಲೆಲ್ಲಾ ಹೋಗಿ ಗ್ರಾಮಸ್ಥರಿಗೆ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಜೊತೆಗೆ ವಿದ್ಯಾರ್ಥಿಗಳಂತೆ ಮಾಹಿತಿ ಪಡೆದುಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.